ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮಕ್ಕೆ 20 ವರ್ಷ
ಕಾರ್ಗಿಲ್ ವಿಜಯ್ ದಿವಸ್ ಗೆ 20 ವರ್ಷದ |ಸಂಭ್ರಮ ಶಾಂತಿ ಒಪ್ಪಂದವಾಗಿದ್ದರೂ ಕಪಟತನ ತೋರಿ ಭಾರತದ ಮೇಲೆ ರಹಸ್ಯ ಆಕ್ರಮಣ ಮಾಡಿದ್ದ ಪಾಕ್ | ಪರ್ವತ ಶಿಖರ ಏರಿ ಆಕ್ರಮಣ ಮಾಡುತ್ತಿದ್ದ ಪಾಕಿಗಳಿಗೆ ತಕ್ಕ ಪಾಠ ಕಲಿಸಿದ ಭಾರತದ ಹೆಮ್ಮೆಯ ಯೋಧರು
ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ. ಪಾಕಿಸ್ತಾನದ ಸೈನಿಕರನ್ನು ನಮ್ಮ ಯೋಧರು ವೀರಾವೇಶದಿಂದ ಹಿಮ್ಮೆಟ್ಟಿಸಿ ವಿಜಯದ ಪತಾಕೆ ಹಾರಿಸಿದ ದಿನ. ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನಾಗಿ ಆಚರಿಸಲಾಗುತ್ತದೆ.
ಪಾಕಿಸ್ತಾನದ ಕಳ್ಳಾಟ ಆರಂಭ
ಚಳಿಗಾಲದ ಋುತುವಿನಲ್ಲಿ, ಕಾಶ್ಮೀರದ ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲಿ ಮೈಕೊರೆಯುವ ಚಳಿಯ ಕಾರಣದಿಂದ, ಗಡಿ ನಿಯಂತ್ರಣ ರೇಖೆಯ ಆಯಾ ಬದಿಗಳಲ್ಲಿರುವ ಕೆಲವು ಮುಂಚೂಣಿ ಶಿಬಿರಗಳನ್ನು ತ್ಯಜಿಸುವುದು ಮತ್ತು ಅತಿಕ್ರಮಣಕ್ಕೆ ದಾರಿಯಾಗಬಹುದಾದ ಪ್ರದೇಶಗಳ ಗಸ್ತನ್ನು ಕುಂಠಿತಗೊಳಿಸುವುದು ಭಾರತ ಮತ್ತು ಪಾಕಿಸ್ತಾನದ ಎರಡೂ ಸೇನೆಗಳ ಸಾಮಾನ್ಯ ವಾಡಿಕೆ.
ಚಳಿಯ ತೀವ್ರತೆ ಕಡಿಮೆಯಾದ ಬಳಿಕ, ಮುಂಚೂಣಿ ಪ್ರದೇಶಗಳನ್ನು ಮರುವಶಕ್ಕೆ ತೆಗೆದುಕೊಂಡು ಪಹರೆ ಆರಂಭಿಸಲಾಗುತ್ತದೆ. 1999ರ ಫೆಬ್ರವರಿ ತಿಂಗಳಲ್ಲಿ, ಪಾಕಿಸ್ತಾನದ ಸೇನೆಯು ಕಾರ್ಗಿಲ… ಪ್ರದೇಶದ ಗಡಿ ನಿಯಂತ್ರಣ ರೇಖೆಯ ತನ್ನ ಬದಿಯಲ್ಲಿ ತ್ಯಜಿಸಿದ್ದ ಶಿಬಿರಗಳನ್ನು ಮರು ಆಕ್ರಮಿಸಿಕೊಳ್ಳಲು ಆರಂಭಿಸಿತು. ಇದರ ಜೊತೆಗೆ ಗಡಿ ನಿಯಂತ್ರಣ ರೇಖೆಯ ಭಾರತದ ಬದಿಯಲ್ಲಿರುವ ಶಿಬಿರಗಳ ಮೇಲೆ ಆಕ್ರಮಣಕ್ಕೆ ತನ್ನ ಪಡೆಗಳನ್ನು ಕಳಿಸಿತು. ಇಲ್ಲಿಂದ ಭಾರತ-ಪಾಕ್ ಯುದ್ಧ ಆರಂಭವಾಯಿತು.
ರಹಸ್ಯವಾಗಿ ಸೇನೆ ಕಳಿಸಿದ ಪಾಕ್
ಕಾರ್ಗಿಲ್ ಯುದ್ಧವು 3 ಪ್ರಮುಖ ಹಂತಗಳಲ್ಲಿ ನಡೆಯಿತು. ಮೊದಲಿಗೆ, ಪಾಕಿಸ್ತಾನವು ಭಾರತದ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತ ನಿಯಂತ್ರಿತ ಕಾಶ್ಮೀರ ಭಾಗಕ್ಕೆ ನುಸುಳುಕೋರರನ್ನು ಕಳುಹಿಸಿತು. ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡು ತನ್ನ ಫಿರಂಗಿಗಳನ್ನು ರಾಷ್ಟ್ರೀಯ ಹೆದ್ದಾರಿ 1 (ಎನ್ಎಚ್ 1)ಗೆ ತರಲು ಅನುಕೂಲ ಮಾಡಿಕೊಂಡಿತು.
ಕೆಳ ಮುಷೋಖ್ ಕಣಿವೆಯ ಶಿಖರಗಳು, ಡ್ರಾಸ್ನ ಮಾರ್ಪೋಲಾ ಪರ್ವತ ಶ್ರೇಣಿಗಳು, ಕಾರ್ಗಿಲ್ ಬಳಿಯ ಕಕ್ಸಾರ್, ಸಿಂಧು ನದಿಯ ಪೂರ್ವಕ್ಕಿರುವ ಬೆಟಾಲಿಕ್ ವಲಯ, ಗಡಿ ನಿಯಂತ್ರಣ ರೇಖೆಯ ಉತ್ತರಕ್ಕೆ ತಿರಗುವ ಚೋರ್ಬಾಟ್ಲಾ ವಲಯದ ಶಿಖರಗಳು ಮತ್ತು ಸಿಯಾಚಿನ್ ಪ್ರದೇಶದ ದಕ್ಷಿಣಕ್ಕಿರುವ ಟರ್ಟೊಕ್ ವಲಯದಲ್ಲಿ ಪಾಕಿಸ್ತಾನಿ ಸೇನೆಯ ಅತಿಕ್ರಮಣ ನಡೆಯಿತು.
5 ಯೋಧರನ್ನು ಕೊಂದ ಪಾಕ್
ಪಾಕಿಸ್ತಾನವು ಭಾರತದ ಗಡಿಯೊಳಗೆ ಸೈನಿಕರನ್ನು ನುಸುಳಿಸಿದ್ದರೂ ಭಾರತದ ಅರಿವಿಗೇ ಬಂದಿರಲಿಲ್ಲ. ಆದರೆ ಕಾಶ್ಮೀರದ ಸ್ಥಳೀಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಭಾರತ 5 ಯೋಧರನ್ನು ಗಸ್ತಿಗೆ ಕಳುಹಿಸಿತು. ಆದರೆ ಆ ಐವರನ್ನೂ ಪಾಕ್ ಚಿತ್ರ ಹಿಂಸೆ ನೀಡಿ ಕೊಂದುಹಾಕಿತು.
ಇದರಿಂದ ಎಚ್ಚೆತ್ತ ಭಾರತ ಪಾಕ್ಗೆ ಪ್ರತ್ಯುತ್ತರ ನೀಡಲು ತನ್ನ ಪಡೆಗಳನ್ನು ಸಜ್ಜುಗೊಳಿಸಿತು. ಭಾರತ ಸರ್ಕಾರ 20,000 ಭಾರತೀಯ ಪಡೆಗಳನ್ನು ಸಜ್ಜುಗೊಳಿಸಿ ‘ಆಪರೇಷನ್ ವಿಜಯ’ ಹೆಸರಿನಲ್ಲಿ ಕಾರಾರಯಚರಣೆ ಆರಂಭಿಸಿತು. ಭಾರತದ ಮೇಲೆ ಆಕ್ರಮಣಕ್ಕೆ ಪಾಕ್ 5000 ಯೋಧರನ್ನು ಕಳುಹಿಸಿತ್ತು. ಈ ಸಂಖ್ಯೆಯ ಅಧಿಕೃತ ಲೆಕ್ಕ ಸಿಕ್ಕಿದ್ದು ಯುದ್ಧದ ಕೊನೆಯಲ್ಲಿ.
ಅಬ್ಬರಿಸಿದ ಭಾರತೀಯ ವಾಯುಪಡೆ
ಕಾರ್ಗಿಲ್ನ ದುರ್ಗಮ ಪ್ರದೇಶಗಳ ಒಳಹೊಕ್ಕು ಪಾಕ್ ಸೇನೆಯನ್ನು ಬಗ್ಗುಬಡಿಯಲು ಭೂಸೇನೆಯೊಂದಿಗೆ ವಾಯುಪಡೆಯೂ ‘ಆಪರೇಷನ್ ಸೇಫ್ ಸಾಗರ್’ ಹೆಸರಲ್ಲಿ ಕಾರ್ಯಾಚರಣೆ ಆರಂಭಿಸಿತು. ಭಾರತೀಯ ವಾಯುಪಡೆಯು ಮಿಗ್-27 ಅನ್ನು ಪಾಕಿಸ್ತಾನ ಸೇನೆಯ ವಿರುದ್ಧ ಬಳಕೆ ಮಾಡಿತ್ತು.
ಆರ್-77 ಕ್ಷಿಪಣಿ, ಮಿಗ್-21 ಮತ್ತು ಮೀರಜ್ 2000 ಯುದ್ಧ ವಿಮಾನಗಳನ್ನು ಬಳಕೆ ಮಾಡಿ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಅತಿ ದೊಡ್ಡ ರಾಕೆಟ್ಗಳು ಹಾಗೂ ಬಾಂಬ್ಗಳನ್ನು ಬಳಕೆ ಮಾಡಲಾಗಿತ್ತು. ಸುಮಾರು 2.50 ಲಕ್ಷ ಬಾಂಬ್ಗಳನ್ನು ಭಸ್ಮ ಮಾಡಲಾಗಿತ್ತು. ಬೋಫೋರ್ಸ್ ಬಂದೂಕುಗಳು ಕಾರ್ಗಿಲ್ ಕಾರಾರಯಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಅದೇ ಸಮಯದಲ್ಲಿ 300 ಫಿರಂಗಿಗಳು, ರಾಕೆಟ್ಗಳನ್ನು ಬಳಸಲಾಗಿತ್ತು. 2ನೇ ವಿಶ್ವಯ್ಧುದ ಬಳಿಕ ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ ಮೊದಲ ಯುದ್ಧ ಇದು ಎಂಬ ಖ್ಯಾತಿ ಪಡೆಯಿತು.
ಪಾಕ್ನ ಉಸಿರುಗಟ್ಟಿಸಿದ ನೌಕಾಪಡೆ
ಪಾಕಿಸ್ತಾನದ ಬಂದರುಗಳಿಗೆ (ಮುಖ್ಯವಾಗಿ ಕರಾಚಿ ಬಂದರಿಗೆ) ತಡೆ ವಿಧಿಸುವ ಪ್ರಯತ್ನದ ಮೂಲಕ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿ ಭಾರತೀಯ ನೌಕಾಪಡೆ ಕೂಡ ಯುದ್ಧ ಸಿದ್ಧತೆ ಮಾಡಿಕೊಂಡಿತು. ಬಳಿಕ, ಪೂರ್ಣ ಸ್ವರೂಪದ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದಲ್ಲಿ ಕೇವಲ 6 ದಿನಗಳಿಗೆ ಸಾಕಾಗುವಷ್ಟುಇಂಧನ ದಾಸ್ತಾನು ಉಳಿದುಕೊಂಡಿದೆಯೆಂದು ಆಗಿನ ಪ್ರಧಾನಮಂತ್ರಿ ನವಾಜ್ ಷರೀಪ್ ಬಹಿರಂಗಪಡಿಸಿದ್ದರು.
ಭಾರತಕ್ಕೆ ಸೋತು ಸುಣ್ಣವಾದ ಪಾಕ್
ಸತತ ಹೋರಾಟದ ಫಲವಾಗಿ ಟೋಲೊಲಿಂಗ್ ಭಾರತದ ವಶವಾಯಿತು. ಈ ವೇಳೆಗಾಗಲೇ ಟೈಗರ್ಹಿಲ್ಸ್ನಲ್ಲಿ ಪಾಕ್ ಪಡೆಗಳು ಭದ್ರವಾಗಿ ಬೇರೂರಿದ್ದವು. ಇಲ್ಲಿ ನಡೆದ ಹೋರಾಟದಲ್ಲಿ ಎರಡೂ ಪಡೆಗಳು ಸಾಕಷ್ಟುಸಾವುನೋವು ಅನುಭವಿಸಿದವು. ಟೈಗರ್ ಹಿಲ್ ಮೇಲೆ ನಡೆದ ಅಂತಿಮ ಪ್ರಹಾರದಲ್ಲಿ 10 ಪಾಕಿಸ್ತಾನಿ ಸೈನಿಕರು ಹತರಾಗಿ ಟೈಗರ್ ಹಿಲಲ್ ಭಾರತದ ಕೈವಶವಾಯಿತು. ಈ ಕಾರ್ಯಾಚರಣೆಯಲ್ಲಿ ಭಾರತ ಕೂಡ ತನ್ನ ಐವರು ಯೋಧರನ್ನು ಕಳೆದುಕೊಂಡಿತು.
ಸಂಘರ್ಷದ ಎರಡು ತಿಂಗಳ ಬಳಿಕ ಅತಿಕ್ರಮಣಕಾರರು ಆಕ್ರಮಿಸಿಕೊಂಡ ಅನೇಕ ಶಿಖರಗಳನ್ನು ಭಾರತದ ಪಡೆಗಳು ನಿಧಾನವಾಗಿ ಮರುವಶಕ್ಕೆ ತೆಗೆದುಕೊಂಡವು. ಆಕ್ರಮಿತ ಪ್ರದೇಶದ ಅಂದಾಜು ಶೇ.75-ಶೇ.80 ಮತ್ತು ಬಹುತೇಕ ಎಲ್ಲ ಎತ್ತರದ ಪ್ರದೇಶಗಳು ಮತ್ತೆ ಭಾರತದ ಸ್ವಾಧೀನವಾದವು. ತರುವಾಯ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಾಚೆಗೆ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ಈ ವೇಳೆಗಾಗಲೆ ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಕುಸಿದುಹೋಗಿತ್ತು.
ಸತ್ತ ಪಾಕಿಸ್ತಾನದ ಯೋಧರ ಹೆಣವನ್ನು ಸ್ವೀಕರಿಸಲೂ ಪಾಕ್ ನಿರಾಕರಿಸಿತು. ಕೊನೆಗೂ 1999ರ ಜುಲೈ 26ರಂದು ಭಾರತ ಜಯಶಾಲಿ ಎಂದು ಘೋಷಿಸಲಾಯಿತು. ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಸೋಲನ್ನು ಒಪ್ಪಿಕೊಂಡರು. ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಾವು ಗೆದ್ದಿದ್ದೇವೆ ಎಂದು ಘೋಷಿಸಿದರು.
ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯಿತು. ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಆ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಪ್ರತಿ ವರ್ಷ ಸ್ಮರಣೆ ಮಾಡಿಕೊಳ್ಳಲಗುತ್ತಿದೆ. ಯುದ್ಧದ ಅಂತ್ಯದಲ್ಲಿ, ಜುಲೈ 1972ರಲ್ಲಿ ಏರ್ಪಟ್ಟಶಿಮ್ಲಾ ಒಪ್ಪಂದದ ಅನ್ವಯ ಗಡಿ ನಿಯಂತ್ರಣ ರೇಖೆಯ ದಕ್ಷಿಣ ಮತ್ತು ಪೂರ್ವಕ್ಕಿರುವ ಎಲ್ಲಾ ಪ್ರದೇಶಗಳ ಮೇಲೆ ಭಾರತ ತನ್ನ ನಿಯಂತ್ರಣ ಸಾಧಿಸಿತು.
ದೇಶದೆಲ್ಲೆಡೆ ಇಂದು ಕಾರ್ಗಿಲ್ ವಿಜಯ ದಿವಸದ ಸಂಭ್ರಮ. ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕಾರ್ಗಿಲ್ ವಿಜಯ್ ದಿವಸ್ ಬಗ್ಗೆ ಟ್ವೀಟ್ ವೊಂದನ್ನು ಮಾಡಿದ್ದಾರೆ.
2004 - 2009 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾರ್ಗಿಲ್ ವಿಜಯ ದಿವಸವನ್ನೇ ಆಚರಿಸಿಲ್ಲ ಎಂದಿದ್ದಾರೆ.