ರಾಜೀವ್ ಗಾಂಧಿ ವಸತಿ ನಿಗಮದ ಹಗರಣ ಕುರಿತು ಮಾಡಿರುವ ಆರೋಪದಿಂದ ಹಿಂದೆ ಸರಿಯಲ್ಲ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್‌.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಲಬುರಗಿ : ‘ನಾನು ಕದನ ಭೂಮಿಯಿಂದ ಓಡಿ ಹೋಗುವವನಲ್ಲ. ನಾನು ಸತ್ಯವನ್ನೇ ಹೇಳಿದ್ದೀನಿ. ನನ್ನ ಹೇಳಿಕೆಗೆ ನಾನು ಈಗಲೂ ಬದ್ದ. ರಾಜೀವ್ ಗಾಂಧಿ ವಸತಿ ನಿಗಮದ ಹಗರಣ ಕುರಿತು ಮಾಡಿರುವ ಆರೋಪದಿಂದ ಹಿಂದೆ ಸರಿಯಲ್ಲ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್‌.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ವಸತಿಗಾಗಿ ಹಣ’ ಕುರಿತ ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ನನ್ನ ಹೇಳಿಕೆ ಸರಿಯಾಗಿದೆ ಎಂದು ರಾಜು ಕಾಗೆ ಸಹ ಹೇಳಿದ್ದಾರೆ. ನನಗೂ ಮೊದಲೇ, ಆರು ತಿಂಗಳ ಹಿಂದೆಯೇ, ಪಕ್ಷದ ಶಾಸಕಾಂಗ ಸಭೆಯಲ್ಲಿ ಏನು ಹೇಳಬೇಕೋ ಅದನ್ನು ಕೆಲವರು ಹೇಳಿದ್ದಾರೆ. ಇನ್ನೂ ಹಲವರು ಇದರ ಬಗ್ಗೆ ಮಾತನಾಡುವವರಿದ್ದಾರೆ‘ ಎಂದರು. ಆ ಮೂಲಕ ಕಾಂಗ್ರೆಸ್ ನಲ್ಲಿ ಇನ್ನೂ ಹಲವು ಅಸಮಾಧಾನಿತ ಶಾಸಕರಿದ್ದಾರೆ ಎಂಬ ಸುಳಿವು ನೀಡಿದರು.

ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ತಮ್ಮ ಕ್ಷೇತ್ರದಲ್ಲಿಯೂ ಏನೂ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ ಎಂದು ಹೇಳಿದ್ದಾರಂತೆ. ಅವರ ಕ್ಷೇತ್ರದ ಜನರು ನನಗೆ ಕರೆ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಮತ್ತೊಬ್ಬ ಶಾಸಕ ಅಸಮಾಧಾನ:

ಇದೇ ವೇಳೆ, ಬಿ‌‌.ಆರ್.ಪಾಟೀಲ ಅವರ ಪಕ್ಕದಲ್ಲಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಸಹ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಕ್ಷೇತ್ರದ ಶಾಸಕನಾದ ನನಗೂ ಮಾಹಿತಿ ನೀಡದೆ, ನನ್ನ ಕ್ಷೇತ್ರದಲ್ಲಿ ಕೆಆರ್‌ಐಡಿಎಲ್ ಕೈಗೊಳ್ಳುವ ಕಾಮಗಾರಿಗಳ ಉದ್ಘಾಟನೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

25ಕ್ಕೆ ಸಿಎಂ ಭೇಟಿ:

ಸಿಎಂ ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತರು. ಹಿಂದೆ ಯಾವ ರೀತಿ ಪ್ರೀತಿ ತೋರಿಸುತ್ತಿದ್ದರೋ, ಈಗಲೂ ಅದೇ ರೀತಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ನನಗೆ ಕರೆ ಮಾಡಿ, ರಾಯಚೂರಿಗೆ ಬರಲು ಹೇಳಿದರು. ಆದರೆ, ಅಲ್ಲಿ ನನಗೆ ಆಹ್ವಾನವಿಲ್ಲ, ನಾನು ಬರಲ್ಲ ಎಂದು ಹೇಳಿದ್ದೇನೆ. ಅದಕ್ಕೆ, ದೆಹಲಿ ಹೋಗಿ ಬರುತ್ತೇನೆ, ಬಳಿಕ, ಬಂದು ಭೇಟಿ ಮಾಡು ಎಂದಿದ್ದಾರೆ. ಜೂ.25ರಂದು ಸಿಎಂ ಭೇಟಿ ಮಾಡುವೆ.

- ಬಿ.ಆರ್.ಪಾಟೀಲ, ಶಾಸಕ.