ನೆರೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್..!
ಜಾಕ್ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ಮೇಲಕ್ಕೆತ್ತುವ ಮೂಲಕ ನೆರೆಯಿಂದಲೂ ತಪ್ಪಿಸಿಕೊಳ್ಳಬಹುದು. ಇಂತಹ ತಂತ್ರಜ್ಞಾನದ ಪ್ರಯೋಗ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ: ವಾಹನದ ಟಯರ್ ಪಂಕ್ಚರ್ ಆದಾಗ ಅದನ್ನು ಬದಲಾಯಿಸಲು ಜಾಕ್ ಬಳಸುವುದನ್ನು ನೋಡಿದ್ದೇವೆ. ಆದರೆ ಅದೇ ಜಾಕ್ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ಮೇಲಕ್ಕೆತ್ತುವ ಮೂಲಕ ನೆರೆಯಿಂದಲೂ ತಪ್ಪಿಸಿಕೊಳ್ಳಬಹುದು.
ಬಿಹಾರ, ಕೇರಳ ದೆಹಲಿ ಮುಂತಾದ ಕಡೆ ಈಗಾಗಲೇ ಚಿರಪರಿಚಿತವಾಗಿರುವ ಈ ತರದ ಕಾಮಗಾರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪನಡು ಗ್ರಾಮದಲ್ಲಿ ಮಾಡಲಾಗಿದೆ.
ಇಲ್ಲಿನ ಬೈಲಗುತ್ತು ನಿವಾಸಿ ರಿಯಾಝ್ ಎಂಬವರ ಮನೆ ಇದೀಗ ಈ ವೈಜ್ಞಾನಿಕ ಕಾಮಗಾರಿಗೆ ಒಳಪಡುತ್ತಿದ್ದು, ಮೊದಲಿದ್ದ ಸ್ಥಳದಿಂದ ನಾಲ್ಕು ಫೀಟ್ ಎತ್ತರಕ್ಕೆ ಏರಲಿದೆ.
ಇದಕ್ಕೆ ಸುಮಾರು ನಾಲ್ಕರಿಂದ ಐದು ಲಕ್ಷ ರು. ಖರ್ಚಾಗುತ್ತದೆ. ಭಾರೀ ಮಳೆಯ ಸಂದರ್ಭ ಇಲ್ಲಿನ ಬೈಲಗುತ್ತು ಹಾಗೂ ಬೊಳಮೆಯ ತಗ್ಗು ಪ್ರದೇಶಗಳಲ್ಲಿ ನೆರೆಬರುವುದು ಸಾಮಾನ್ಯವಾಗಿದ್ದರಿಂದ ಈ ತಂತ್ರದ ಮೊರೆ ಹೋಗಲಾಗಿದೆ. ದೆಹಲಿ ಮೂಲದ ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕನ್ಸ್ಟ್ರಕ್ಷನ್ ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು ಇಂತಹ ಪ್ರಯೋಗ ಕರ್ನಾಟಕದಲ್ಲಿ ನಡೆಯುತ್ತಿರುವುದು ಮೊದಲ ಬಾರಿ ಎನ್ನಲಾಗಿದೆ.