ರಾಜ್ಯ ಬಿಜೆಪಿ ಶಾಸಕರ ನಿದ್ದೆಗೆಡಿಸಿದೆ ಗುಜರಾತ್ ಚುನಾವಣೆ!ಅಲ್ಲಿನ ರಣತಂತ್ರ ಯಶಸ್ವಿಯಾದ್ರೆ ರಾಜ್ಯದಲ್ಲೂ ಯಥಾವತ್ ಅಳವಡಿಕೆ

ಬೆಂಗಳೂರು: 2018ರ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ರಾಜ್ಯ ನಾಯಕರು ಮತ್ತು ಹಾಲಿ ಶಾಸಕರನ್ನು ಬೆಚ್ಚಿಬೀಳಿಸುವಂತಿವೆ.

ಉತ್ತರ ಪ್ರದೇಶ ಮಾದರಿ ಗುಜರಾತ್​ ಚುನಾವಣೆಯಲ್ಲಿ ಇನ್ನಷ್ಟು ಪಕ್ವಗೊಂಡಿದ್ದು, ಹಾಲಿ ಶಾಸಕರನ್ನ ನಿದ್ದೆಗೆಡಿಸಿರುವುದರ ಜೊತೆಗೆ 150 ಅಭ್ಯರ್ಥಿಗಳನ್ನು ತಾನೇ ಹುಡುಕಲು ಹೈಕಮಾಂಡ್​ ಮುಂದಾಗಿರುವುದು ರಾಜ್ಯ ನಾಯಕರನ್ನು ಕಂಗಾಲಾಗಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಬಾಕಿ ಇರುವುದು ಕೇವಲ ಮೂರ್ನಾಲ್ಕು ತಿಂಗಳು ಮಾತ್ರ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್​ ತುಳಿಯುತ್ತಿರುವ ಹಾದಿ ರಾಜ್ಯ ನಾಯಕರಿಗೆ ಮತ್ತು ಹಾಲಿ ಶಾಸಕರಲ್ಲಿ ನಡುಕ ಹುಟ್ಟಿಸಿದೆ. ಒಂದು ವೇಳೆ ಗುಜರಾತ್​ನಲ್ಲಿ ಹೈಕಮಾಂಡ್ ರಣತಂತ್ರ ಯಶಸ್ವಿಯಾದರೆ, ಅದೇ ಮಾದರಿಯ ಪ್ಲಾನ್ ಕರ್ನಾಟಕ ಚುನಾವಣೆಗೆ ಅಳವಡಿಕೆಯಾಗಲಿದೆ. ಇದೇ ಈಗ ಹಾಲಿ ಶಾಸಕರನ್ನ ನಿದ್ದೆಗೆಡಿಸಿರುವುದು.

ಹೈಕಮಾಂಡ್​ನಿಂದಲೇ 150 ಅಭ್ಯರ್ಥಿಗಳಿಗಾಗಿ ಶೋಧ ನಡೆಯುತ್ತಿದೆ. ಗುಜರಾತ್​ ನಂತೆಯೇ ರಾಜ್ಯದಲ್ಲಿ ಹಾಲಿ ಶಾಸಕರಿಗೆ ಕೊಕ್​ ನೀಡುವ ಸಾಧ್ಯತೆ ಇದೆಯೆನ್ನಲಾಗಿದ್ದು, ಶಾಸಕರಿಗೆ ಕ್ಷೇತ್ರ ಬದಲಾವಣೆಯ ಭೂತ ಕಾಡುತ್ತಿದೆ.

ಇಡೀ ರಾಜ್ಯ ಬಿಜೆಪಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಸರಿ ಹೈಕಮಾಂಡ್​ ಪ್ರತಿ ದಿನ ಹೊಸದೊಂದು ತಂತ್ರ ಪ್ರಯೋಗಿಸುತ್ತಿದೆ. ಈಗಾಗಲೇ 150 ಕ್ಷೇತ್ರಗಳಿಗೆ ತಾನೇ ಅಭ್ಯರ್ಥಿಗಳನ್ನು ಶೋಧಿಸುವುದಾಗಿ ರಾಜ್ಯ ನಾಯಕರಿಗೆ ಮೌಖಿಕ ಸಂದೇಶ ರವಾನೆಯಾಗಿದೆ.

ಈಗಾಗಲೇ ಗುಜರಾತ್​ನಲ್ಲಿ 35ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್​ ನಿರಾಕರಿಸಲಾಗಿದ್ದು, ಹಲವು ಶಾಸಕರ ಕ್ಷೇತ್ರಗಳನ್ನು ಬದಲಾಯಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿದ್ದ ಈ ಕಾರ್ಯತಂತ್ರ ಗುಜರಾತ್’ನಲ್ಲಿ ಮತ್ತಷ್ಟು ಬಲಯುತವಾಗಿ ಕಾರ್ಯರೂಪಕ್ಕೆ ಇಳಿದಿದೆ.

ಗುಜರಾತ್​ನಲ್ಲಿ ಇದು ಸಂಪೂರ್ಣ ಯಶಸ್ವಿಯಾದರೆ ಯಾವುದೇ ಬದಲಾವಣೆಯಿಲ್ಲದೇ ರಾಜ್ಯದಲ್ಲಿ ಕೂಡಾ ಅಳವಡಿಕೆಯಾಗಲಿದೆ. ಒಟ್ಟಿನಲ್ಲಿ, ಚುನಾವಣೆಯ ಸಮೀಪದಲ್ಲಿ ಇಷ್ಟು ದಿನ ರಾಜ್ಯ ಬಿಜೆಪಿಯಲ್ಲಿ ನಾವೇ ಸುಪ್ರೀಂ ಅಂತಾ ಓಡಾಡುತ್ತಿದ್ದವರಿಗೆ ಹೈಕಮಾಂಡ್ ಬಿಸಿ ಮುಟ್ಟಿಸುವುದು ಖಚಿತವಾಗುತ್ತಿದೆ.

ವರದಿ: ಕಿರಣ್​ ಹನಿಯಡ್ಕ