ಖಾತೆ ಬದಲಿಸುವಂತೆ ಜಿಟಿಡಿ ಬೆಂಬಲಿಗರ ಪ್ರತಿಭಟನೆ
ಉನ್ನತ ಶಿಕ್ಷಣ ಖಾತೆಯನ್ನು ಬದಲಿಸುವಂತೆ ಜಿ.ಟಿ.ದೇವೇಗೌಡ ಬೆಂಬಲಿಗರು ಪಟ್ಟು ಹಿಡಿದು ಮೈಸೂರಿನ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ
ಮೈಸೂರು[ಜೂ.09]: ಖಾತೆ ಹಂಚಿಕೆ ನಂತರ ಜೆಡಿಎಸ್'ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ಬದಲು ಪ್ರಭಾವಿ ಖಾತೆಗೆ ಪಟ್ಟು ಹಿಡಿಯುವಂತೆ ಆಗ್ರಹಿಸಿ ಜಿಟಿಜಿ ಬೆಂಬಲಿಗರು ಮೈಸೂರಿನ ವಿಜಯನಗರದ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಶಾಸಕರ ಯೋಗ್ಯತೆಯ ಅನುಸಾರ ಪ್ರಭಾವಿ ಖಾತೆ ನೀಡಿ ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಜಿ.ಟಿ.ದೇವೇಗೌಡ ಪುತ್ರ ಸಮಜಾಯಿಷಿ ನೀಡಿದರೂ ಬೆಂಬಲಿಗರೂ ಸಮಧಾನಗೊಳ್ಳಲಿಲ್ಲ. ಪ್ರತಿಭಟನೆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಲು ನಿರ್ಧರಿಸಿದ್ದಾರೆ.
ಜೆಡಿಎಸ್ ಮುಖಂಡ ಮುಖ್ಯಮಂತ್ರಿ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆ ಸುಳ್ಳಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮಾನಾದ ಅಧಿಕಾರ ನೀಡುವುದಾಗಿ ಹೇಳಿದ್ದರು. ಈಗ ಜಿಟಿಡಿ ಅವರಿಗೆ ಕೇಳಿದ ಖಾತೆ ಸಿಕ್ಕಿಲ್ಲ. ಖಾತೆ ಕೊಡುವುದಕ್ಕು ಮುನ್ನ ಸಮಾಲೋಚನೆ ಸಹ ನಡೆಸಿಲ್ಲ. ವರಿಷ್ಟರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪ್ತರ ಬಳಿ ಜಿಟಿಡಿ ಅವರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಟಿ ದೇವೇಗೌಡ ಅವರು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಸರ್ಕಾರಿ ಕಾರನ್ನು ನಿನ್ನೆಯೇ ವಾಪಸ್ ಕೊಟ್ಟಿದ್ದಾರೆ.