ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಬಸ್ ಪಾಸ್ ನೀಡುವ ಕುರಿತು ಪರಿಶೀಲನೆ ನಡೆಸುವುದಾಗಿ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಸದನಕ್ಕೆ ಭರವಸೆ ನೀಡಿದರು.

ವಿಧಾನಸಭೆ(ನ.23): ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಬಸ್ ಪಾಸ್ ನೀಡುವ ಕುರಿತು ಪರಿಶೀಲನೆ ನಡೆಸುವುದಾಗಿ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಸದನಕ್ಕೆ ಭರವಸೆ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಎನ್.ಎ ಹ್ಯಾರಿಸ್, ಸದ್ಯ ಇಲಾಖೆಯಿಂದ 1 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಇದನ್ನು 10 ನೇ ತರಗತಿವರೆಗೂ ವಿಸ್ತರಿಸಿ ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು. ಸಾರಿಗೆ ಸಂಸ್ಥೆ ಅನೇಕ ರೀತಿಯಲ್ಲಿ ಉಚಿತ ಬಸ್ ಪಾಸ್ ಮತ್ತು ರಿಯಾಯಿತಿಗಳನ್ನು ನೀಡುತ್ತಿರುವುದರಿಂದ ನಷ್ಟದಲ್ಲಿದೆ. ಪ್ರತಿ ವರ್ಷ ಸಂಸ್ಥೆಗಳಿಗೆ ಬರುವ ಒಟ್ಟಾರೆ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿದೆ ಎಂದು ರೇವಣ್ಣ ವಿವರಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾರಿಗೆ ಸಚಿವರು!: ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಬುಧವಾರ ವಿಧಾನಸಭೆಯಲ್ಲಿ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರನ್ನು ‘ಮಾರಿಗೆ ಸಚಿವ’ ಎಂದು ಕರೆದು ಚರ್ಚೆಗೆ ಗ್ರಾಸವಾದರು. ಪ್ರಶ್ನೋತ್ತರ ಕಲಾಪದಲ್ಲಿ ಸೋಮಶೇಖರ್ ಮಾತನಾ ಡುತ್ತಾ, ಸಾರಿಗೆ ಸಚಿವರು ಎನ್ನುವ ಬದಲು ಮಾರಿಗೆ ಸಚಿವರು ಎಂದರು.

ಇದಕ್ಕೆ ಸಚಿವರಾದಿಯಾಗಿ ಅನೇಕ ಶಾಸಕರು ಸೋಮಶೇಖರ್ ಯಾವ ಗುಂಗಿನಲ್ಲಿದಾರೆ ಎಂದು ಪ್ರಶ್ನಿಸುವ ಮೂಲಕ ಲೇವಡಿ ಮಾಡಿದರು. ಕಾಂಗ್ರೆಸ್‌ನ ಅಶೋಕ್ ಪಟ್ಟಣ, ಸೋಮಶೇಖರ್ ನಿನ್ನೆ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಆದ್ದರಿಂದ ಅದೇ ಗುಂಗಿನಲ್ಲಿದ್ದು, ಸಾರಿಗೆ ಬದಲು ಮಾರಿಗೆ ಎಂದಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಸೋಮಶೇಖರ್ ನನ್ನನ್ನು ಸಾರಿಗೆ ಸಚಿವ ಎನ್ನುವ ಬದಲು ಮಾರಿಗೆ ಎಂದಿದ್ದಾರೆ. ಬಹುಶಃ ಅವರು ಮಾರ್ಗ ಬದಲಿಸಿರಬೇಕು. ಅದಕ್ಕೇ ಹಾಗೆಂದು ಹೇಳಿರಬಹುದು ಬಿಡಿ ಎಂದು ಹೇಳಿದರು.