ಹಂತಕರ ಪತ್ತೆಗೆ ಇನ್ನೇಷ್ಟು ತಿಂಗಳು ಬೇಕು? ಹಂತಕರನ್ನು ಬಂಧಿಸಲು ಇನ್ನೆಷ್ಟು ದಶಕಗಳು ಬೇಕು? ಮುಖ್ಯಮಂತ್ರಿಗಳೇ ಉತ್ತರ ನೀಡಿ ಎಂದು ಗೌರಿ ಲಂಕೇಶ್ ಬಳಗ ಒತ್ತಾಯಿಸಿದೆ.

ಬೆಂಗಳೂರು(ಡಿ.05): ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಾಗಿ ಇಂದಿಗೆ ಮೂರು ತಿಂಗಳಾಗಿದೆ. ಜೊತೆಗೆ ಸಂಶೋಧಕ ಎಂ.ಎಂ.ಕಲ್ಬುರ್ಗಿ 30 ತಿಂಗಳಾಯ್ತು. ಆದರೆ ಆರೋಪಿಗಳು ಮಾತ್ರ ಪತ್ತೆಯಾಗಿಲ್ಲ.

ಹಂತಕರ ಪತ್ತೆಗೆ ಇನ್ನೇಷ್ಟು ತಿಂಗಳು ಬೇಕು? ಹಂತಕರನ್ನು ಬಂಧಿಸಲು ಇನ್ನೆಷ್ಟು ದಶಕಗಳು ಬೇಕು? ಮುಖ್ಯಮಂತ್ರಿಗಳೇ ಉತ್ತರ ನೀಡಿ ಎಂದು ಗೌರಿ ಲಂಕೇಶ್ ಬಳಗ ಒತ್ತಾಯಿಸಿದೆ. ಈ ಸಂಬಂಧ ಇಂದು ಮುಖ್ಯಮಂತ್ರಿಗಳ ಮನೆಗೆ ಪ್ರತಿಭಟನಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 11 ಗಂಟೆಗೆ ಗಾಂಧಿ ನಗರ ಮೌರ್ಯ ಸರ್ಕಲ್ ಬಳಿಯಿಂದ ರೇಸ್ ಕೋರ್ಸ್ ಬಳಿಯಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸದವರೆಗೆ ಧರಣಿಯನ್ನು ಗೌರಿ ಲಂಕೇಶ್ ಬಳಗ ಹಮ್ಮಿಕೊಂಡಿದ್ದು, ಹಂತಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಲಿದ್ದಾರೆ. ಗೌರಿ ಲಂಕೇಶ್ ಅವರನ್ನು ಅವರ ನಿವಾಸದ ಬಳಿಯೇ ಸೆಪ್ಟೆಂಬರ್ 5 ರಂದು ಅಪರಿಚಿತರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆ ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್'ಐಟಿಗೆ ಒಪ್ಪಿಸಿತ್ತು. ಅಕ್ಟೋಬರ್ ತಿಂಗಳ ಆರಂಭದಲ್ಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಎಸ್'ಐಟಿ ತಂಡಕ್ಕೆ ಹಂತಕರ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದರು. ಅವರು ಹೇಳಿಕೆ ನೀಡಿ ಸುಮಾರು 2 ತಿಂಗಳು ಕಳೆದಿದ್ದರೂ ಇನ್ನೂ ಹಂತಕರನ್ನು ಪೊಲೀಸರನ್ನು ಬಂಧಿಸಿಲ್ಲ.