ಒಂದೆಡೆ ಕೇಂದ್ರ ಸರಕಾರ ನಾವು ಗಂಗಾ ನದಿಯನ್ನು ಶುದ್ಧ ಮಾಡುತ್ತೇವೆ. ಅದಕ್ಕಾಗಿ ಯೋಜನೆ ರೂಪಿಸಿ ಕಾರ್ಯಗತ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಹೊರಬಿದ್ದಿದೆ. ಭಾರತೀಯರು ಗಂಗಾ ನದಿ ನೀರನ್ನು ಪವಿತ್ರ ಎಂದು ಭಾವಿಸಿರುವ ನಂಬಿಕೆಗೆ ಘಾಸಿಯಾಗುವಂತಹ ವಿಚಾರ ಹೊರಬಿದ್ದಿದೆ.

ನವದೆಹಲಿ[ಜು.27] ಪವಿತ್ರ ನದಿ ಗಂಗೆಯ ನೀರು ಕುಡಿಯಲಿಕ್ಕೆ ಇರಲಿ ಅಥವಾ ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಹೇಳಿದೆ. ಹರಿದ್ವಾರದಿಂದ ಉತ್ತರ ಪ್ರದೇಶದ ಉನ್ನಾವೋ ವರೆಗಿನ ಗಂಗಾ ನದಿಯ ನೀರು ಕುಡಿಯಲು, ಸ್ನಾನ ಹಾಗೂ ಇತರೆ ಬಳಕೆಗೆ ಅರ್ಹವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.

Add Asianetnews Kannada as a Preferred SourcegooglePreferred

ಏನು ಅರಿಯದ ಜನರು ಇದೇ ನೀರನ್ನು ಎಲ್ಲ ಕೆಲಸಗಳಿಗೆ ಬಳಕೆ ಮಾಡುತ್ತಾರೆ. ಸಿಗರೇಟ್ ಪ್ಯಾಕ್ ಗಳಲ್ಲಿ ಹೇಗೆ ಎಚ್ಚರಿಕೆ ಸಂದೇಶವಿರುತ್ತದೆಯೋ ಹಾಗೆಯೇ ನದಿಯ ನೀರಿನ ಬಗೆಗೆ ಸಹ ಎಚ್ಚರಿಕೆ ಸಂದೇಶ ಸಾರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದೆ.

ರಾಷ್ಟ್ರೀಯ ಹಸಿರು ಪೀಠ [ಎನ್ಜಿಟಿ] ಮುಖ್ಯಸ್ಥ ಎ.ಕೆ. ಗೋಯೆಲ್ ನೇತೃತ್ವದ ಪೀಠವು ಗಂಗಾ ನದಿ ನೀರಿನ ಪರಿಶುದ್ಧತೆ ಬಗೆಗೆ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ನದಿಯಿಂದ ನೂರು ಮೀಟರ್ ಅಂತರದಲ್ಲಿ ಎಚ್ಚರಿಕೆ ಫಲಕ ಅಳವಡಿಸುವಂತೆ ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ (ಎನ್ ಎಂಸಿಜಿ) ಗೆ ನಿರ್ದೇಶನ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಎರಡು ವಾರಗಳೊಳಗೆ ತಮ್ಮ ಅಧಿಕೃತ ವೆಬ್ ಸೈಟ್ ಗಳಲ್ಲಿ ಗಂಗೆಯಲ್ಲಿ ಸ್ನಾನ ಹಾಗೂ ಕುಡಿಯುವುದಕ್ಕೆ ಯೋಗ್ಯವಾದ ನೀರು ಎಲ್ಲೆಲ್ಲಿ ಸಿಗಲಿದೆ ಎನ್ನುವ ಕುರಿತು ಒಂದು ನಕ್ಷೆಯನ್ನು ಅಳವಡಿಸಬೇಕು ಎಂದು ಪೀಠ ಹೇಳಿರುವುದು ಒಂದರ್ಥದಲ್ಲಿ ಕೇಂದ್ರ ಸರಕಾರಕ್ಕೆ ಮುಜಗರ ತಂದಿದೆ.