ಆನೆದಂತ ವಶಪಡಿಸಿದ ಅರಣ್ಯಾಧಿಕಾರಿಗಳು; ಆರೋಪಿ ಸೆರೆ
- ಕಾಡಾನೆ ಕೊಂದು ಅಪಹರಿಸಲಾಗಿದ್ದ ದಂತ ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು
- ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದಲ್ಲಿ ಘಟನೆ
ಚಾಮರಾಜನಗರ: ಕಾಡಾನೆ ಕೊಂದು ಅಪಹರಿಸಲಾಗಿದ್ದ ಆನೆ ದಂತಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಮಲೆಮಹದೇಶ್ವರಬೆಟ್ಟ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದಲ್ಲಿ ಆನೆಯೊಂದನ್ನು ಕೊಂದು ಅದರ ಎರಡು ದಂತಗಳನ್ನು ಅಪಹರಿಸಲಾಗಿತ್ತು.
ಕೊಳ್ಳೇಗಾಲ ತಾಲ್ಲೂಕಿನ ಸೂಳೆಕೋಬೆ ಗ್ರಾಮದ ಸಣ್ ಪುಟ್ಟ (40) ಎಂಬಾತ ಈ ಕೃತ್ಯ ಎಸಗಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಖಚಿತ ಮಾಹಿತಿ ದೊರಕಿತ್ತು.
ಈ ಹಿನ್ನಲೆಯಲ್ಲಿ ಸಣ್ ಪುಟ್ಟನ ಮನೆ ಮೇಲೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆತನ ಮನೆಯಲ್ಲಿ ಅಡಗಿಸಿಟ್ಟಿದ್ದ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.