ರಾಜಕೀಯ ಹೈಡ್ರಾಮಾ: ನಾಳೆ ವಿಧಾನಸಭೆ ವಿಸರ್ಜನೆ?
ತೆಲಂಗಾಣದಲ್ಲಿ ರಾಜಕೀಯ ಹೈಡ್ರಾಮಾ! ನಾಳೆ ವಿಧಾನಸಭೆ ವಿಸರ್ಜನೆ ಸಾಧ್ಯತೆ! ನಾಳೆ ಮಧ್ಯಾಹ್ನ ಸಚಿವ ಸಂಪುಟ ಸಭೆ! ತೆಲಂಗಾಣ ಸಿಎಂ ಕೆಸಿಆರ್ ಮಹತ್ವದ ನಿರ್ಧಾರ! ಲೋಕಸಭೆ ಚುನಾವಣೆ ಜೊತೆ ವಿಧಾನಸಭೆ ಚುನಾವಣೆ ಬೇಡ
ಹೈದರಾಬಾದ್(ಸೆ.1): ತೆಲಂಗಾಣದಲ್ಲಿ ರಾಜಕೀಯ ಹೈಡ್ರಾಮಾ ತಾರಕ್ಕಕ್ಕೇರಿದ್ದು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಸಿಆರ್ ನಾಳೆ ಅಧಿಕೃತವಾಗಿ ವಿಧಾನಸಭೆಯನ್ನು ವಿಸರ್ಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ನಾಳೆ ಮಧ್ಯಾಹ್ನ 1 ಗಂಟೆಗೆ ಸಿಎಂ ಕೆಸಿಆರ್ ಸಚಿವ ಸಂಪುಟ ಸಭೆ ಕರೆದಿದ್ದು, ಸಂಪುಟ ಸಭೆಯ ಬಳಿಕ ವಿಧಾನಸಭೆ ವಿಸರ್ಜಿಸುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೆ ನಾಳೆ ರಂಗಾರೆಡ್ಡಿ ಜಿಲ್ಲೆಯಲ್ಲಿ ಪ್ರಗತಿ ನಿವೇಧನಾ ಸಭಾ ಎಂಬ ಹೆಸರಿನ ಬೃಹತ್ ಸಮಾವೇಶ ಕೂಡ ಏರ್ಪಡಿಸಲಾಗಿದ್ದು, ರಾಜ್ಯ ವಿಭಜನೆ ಬಳಿಕ ರಚನೆಯಾದ ಮೊದಲ ಸರ್ಕಾರದ ಸಾಧನೆಯನ್ನು ಕೆಸಿಆರ್ ಜನರ ಮುಂದಿಡಲಿದ್ದಾರೆ.
ನಾಳೆ ನಮ್ಮ ಪಕ್ಷದ ನಾಯಕರು ಅತ್ಯಂತ ಮಹತ್ವದ ರಾಜಕೀಯ ನಿರ್ಧಾರ ಘೋಷಿಸಲಿದ್ದಾರೆ. ಪ್ರಗತಿ ನಿವೇಧನಾ ಸಭೆಯ ನಂತರ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಳ್ಳಲಿದೆ ಎಂದು ಮುಖ್ಯಮಂತ್ರಿ ಕೆಸಿಆರ್ ಪುತ್ರ, ಟಿಆರ್ ಎಸ್ ನಾಯಕ ಹಾಗೂ ತೆಲಂಗಾಣ ಸಚಿವ ಕೆಟಿ ರಾಮರಾವ್ ತಿಳಿಸಿದ್ದಾರೆ.
ಕೆಸಿಆರ್ ನೇತೃತ್ವದ ಟಿಆರ್ ಎಸ್ ಸರ್ಕಾರ ಮೇ 2019ಕ್ಕೆ ಅವಧಿ ಪೂರ್ಣಗೊಳಿಸಲಿದ್ದು, ಲೋಕಸಭೆ ಜೊತೆಗೆ ಚುನಾವಣೆ ನಡೆಯಬೇಕಿದೆ. ಆದರೆ ಲೋಕಸಭೆ ಚುನಾವಣೆ ಜೊತೆ ವಿಧಾನಸಭೆ ಚುನಾವಣೆ ಎದುರಿಸಿದರೆ ಟಿಆರ್ಎಸ್ ಗೆ ಹಿನ್ನಡೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಸಿಆರ್ ಅವಧಿಗೂ ಮುನ್ನವೇ ವಿಧಾಸಭೆ ವಿಸರ್ಜಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.