ಬೋಟ್ ಹತ್ತಲಾಗದವರಿಗೆ ಈ ಯುವಕನ ಬೆನ್ನೇ ಮಟ್ಟಿಲು!
ಕೇರಳದ ಗಲ್ಲಿಗಲ್ಲಿಗಳಲ್ಲಿ ಮಾನವೀಯತೆ ಅನಾವರಣ! ಪರಸ್ಪರ ಹೆಗಲು ಕೊಟ್ಟು ಪ್ರವಾಹ ಎದುರಿಸುತ್ತಿರುವ ಕೇರಳಿಗರು! ಬೋಟ್ ಹತ್ತಲು ತನ್ನ ಬೆನ್ನನ್ನೇ ಮೆಟ್ಟಿಲು ಮಾಡಿದ ಯುವಕ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಜೈಸಲ್ ವಿಡಿಯೋ! ಜೈಸಲ್ ಸಾಮಾಜಿಕ ಕಳಕಳಿಗೆ ಎಲ್ಲೆಡೆ ಭಾರೀ ಮೆಚ್ಚುಗೆ
ಮಲಪ್ಪುರಂ(ಆ.20): ಭೀಕರ ಮಳೆಗೆ ನಲುಗಿ ಹೋಗಿರುವ ಕೇರಳದ ಗಲ್ಲಿಗಲ್ಲಿಗಳಲ್ಲಿ ಮಾನವೀಯತೆಯ ಅನಾವರಣವಾಗುತ್ತಿದೆ. ಒಬ್ಬರಿಗೊಬ್ಬರು ನೆರವಾಗಿ ಜಲಪ್ರಳಯವನ್ನು ಎದುರಿಸುತ್ತಿದ್ದಾರೆ ಕೇರಳಿಗರು.
ಅದರಂತೆ ನೆರೆ ಸಂತ್ರಸ್ತರು ರಕ್ಷಣಾ ಬೋಟ್ ಹತ್ತುವಾಗ ಮೆಟ್ಟಿಲಾಗಿ ಬೆನ್ನು ಬಾಗಿಸಿ ನೀಡಿದ ಮೀನುಗಾರನೊಬ್ಬನ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ತಾನೂರ್ ನಿವಾಸಿ ಜೈಸಲ್ ಎಂಬ ಮೀನುಗಾರ ನೀರಲ್ಲಿ ಬಾಗಿ ತನ್ನ ಮೇಲೆ ಕಾಲಿಟ್ಟು ಬೋಟ್ ಹತ್ತುವಂತೆ ಹೇಳಿದ ವಿಡಿಯೋ ವೈರಲ್ ಆಗಿದೆ.
ಕೇರಳ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ವಯಂ ಸೇವಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜೈಸಲ್, 2002ರಿಂದಲೂ ವಿಪತ್ತು ಪರಿಹಾರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ತಮ್ಮ ವೀಡಿಯೋ ವೈರಲ್ ಆಗಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಜೈಸಲ್, ತಾವು ಪರಿಹಾರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದರಲ್ಲಿ ದೊಡ್ಡತನವಿಲ್ಲ ಬದಲಿಗೆ ಇದು ತಮ್ಮ ಸಾಮಾಜಿಕ ಜವಾಬ್ದಾರಿ ಎಂದು ಹೇಳಿದ್ದಾರೆ.