ಯೋಧನ ಕುಟುಂಬಸ್ಥರು, ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ ಹಾಗೂ ಆತ್ಮಹತ್ಯೆ  ಮಾಡಿಕೊಳ್ಳುವ ಮುಂಚೆ ಗ್ರೆವಾಲ್ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್’ಗೆ ಪತ್ರ ಬರೆದಿದ್ದರು ಎನ್ನಲಾಗಿದೆ.

ನವದೆಹಲಿ (ನ.02): ಸಮಾನ ಹುದ್ದೆ-ಸಮಾನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ವಿಳಂಬದಿಂದ ಬೇಸತ್ತು ಮಾಜಿ ಯೋಧನೋರ್ವ ಆತ್ಮಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರಾಮ್ ಕಿಶನ್ ಗ್ರೆವಾಲ್, ಸೇನೆಯಿಂದ ನಿವೃತ್ತರಾಗಿದ್ದು, ಸಮಾನ ಹುದ್ದೆ-ಸಮಾನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಳಂಬದಿಂದ ನೊಂದಿದ್ದರು ಎನ್ನಲಾಗಿದೆ.

ಗ್ರೆವಾಲ್ ಕುಟುಂಬಸ್ಥರು, ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಗ್ರೆವಾಲ್ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್’ಗೆ ಪತ್ರ ಬರೆದಿದ್ದರು ಎನ್ನಲಾಗಿದೆ.

ರಾಹುಲ್ ಗಾಂಧಿ ಪೊಲೀಸರ ವಶಕ್ಕೆ:

ಮೃತ ಯೋಧನ ಕುಟುಂಬಸ್ಥರನ್ನು ಭೇಟಿಯಾಗಲು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಬಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪೊಲೀಸರು ಆಸ್ಪತ್ರೆ ಗೇಟ್’ನಲ್ಲೇ ತಡೆದು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ ರಾಮ್ ಕಿಶನ್ ಕುಟುಂಬಸ್ಥರನ್ನು ಭೇಟಿಯಾಗಲು ಬಂದಿದ್ದ ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಅವರನ್ನು ಕೂಡಾ ದೆಹಲಿ ಪೊಲೀಸರು ಬಂಧಿಸಿದ್ದಾರೆ.