ಕೆರೆಗಳ ಅಂಚಿನಿಂದ 75 ಮೀಟರ್‌ ಹಾಗೂ ರಾಜಕಾಲುವೆ ಅಂಚಿನಿಂದ 50 ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶದ ಅನುಸಾರ ಬೆಂಗಳೂರು ನಗರದ 28 ರಿಯಲ್‌ ಎಸ್ಟೇಟ್‌ ಯೋಜನೆಗಳ ಅನುಮತಿ ರದ್ದುಪಡಿಸಲಾಗಿದೆ

ಬೆಂಗಳೂರು(ಮಾ.12): ಕೆರೆಗಳ ಅಂಚಿನಿಂದ 75 ಮೀಟರ್‌ ಹಾಗೂ ರಾಜಕಾಲುವೆ ಅಂಚಿನಿಂದ 50 ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶದ ಅನುಸಾರ ಬೆಂಗಳೂರು ನಗರದ 28 ರಿಯಲ್‌ ಎಸ್ಟೇಟ್‌ ಯೋಜನೆಗಳ ಅನುಮತಿ ರದ್ದುಪಡಿಸಲಾಗಿದೆ.

ಎನ್‌ಜಿಟಿ ಆದೇಶದ ಅನುಸಾರ ಪರಿಸರ ಅನುಮತಿ ನೀಡಬೇಕಾದ ರಾಜ್ಯಮಟ್ಟದ ‘ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ' (ಸ್ಟೇಟ್‌ ಎನ್ವಿರಾನ್‌ಮೆಂಟಲ್‌ ಇಂಪ್ಯಾಕ್ಟ್ ಅಸ್ಸೆಸ್‌ಮೆಂಟ್‌ ಅಥಾರಿಟಿ) ಈ ಆದೇಶ ನೀಡಿದ್ದು, ಇದರಿಂದ ಚಾಲ್ತಿಯಲ್ಲಿರುವ 28 ರಿಯಲ್‌ ಎಸ್ಟೇಟ್‌ ಯೋಜನೆಗಳು ನನೆಗುದಿಗೆ ಬಿದ್ದಿವೆ.

ಅನುಮತಿ ಸಿಗದ ಸಂಸ್ಥೆಗಳು: ಬಾಗ್‌ಮಾನೆ, ಪುರವಂಕರ, ಪ್ರೆಸ್ಟೀಜ್‌, ಮಂತ್ರಿ ಟೆಕ್‌ ಝೋನ್‌, ಕೋರ್‌ಮೈಂಡ್‌ ಸಾಫ್ಟ್‌ ವೇರ್‌ ಆ್ಯಂಡ್‌ ಸರ್ವಿಸಸ್‌ ಕಂಪನಿ, ಟಿಜಿಆರ್‌ ಪ್ರಾಜೆಕ್ಟ್, ಸ್ಟೆರ್ಲಿಂಗ್‌ ಡೆವಲಪರ್ಸ್‌, ಜಿಎಸ್‌ವಿ ಪ್ರಾಜೆಕ್ಟ್, ಸಾಯಿ ಪೂರ್ವಿ ಡೆವಲ ಪರ್ಸ್‌, ಎಸ್ಟೀಮ್‌ ಅಲ್ಚೆಮಿ ಸೇರಿದಂತೆ 28 ರಿಯಲ್‌ ಎಸ್ಟೇಟ್‌ ಕಂಪನಿಗಳು ಹಾಗೂ ಕುಂಬಳಗೂಡು ಕೈಗಾರಿಕಾ ಪ್ರದೇಶದಲ್ಲಿ ಪೈ ಆ್ಯಂಡ್‌ ಪೈ ಕೆಮಿಕಲ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಕೈಗಾರಿಕೆ ಘಟಕಗಳಿಗೆ ಅನುಮತಿ ನೀಡಲು ನಿರಾಕರಿಸಲಾಗಿದೆ.

ಹಿನ್ನೆಲೆ ಏನು?: ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಅಗರ ಹಾಗೂ ಜಕ್ಕಸಂದ್ರ ಗ್ರಾಮಗಳಲ್ಲಿ ಮನೆ, ಹೋಟೆಲ್‌ ಮತ್ತು ಕಚೇರಿ ಬಳಕೆಯ ಕಟ್ಟಡ ನಿರ್ಮಾಣಕ್ಕೆ ಮಂತ್ರಿ ಡೆವಲಪರ್ಸ್‌ 2012ರ ಫೆಬ್ರವರಿಯಲ್ಲಿ ಅನುಮತಿ ಕೋರಿತ್ತು. ಅಗರ ಗ್ರಾಮದಲ್ಲಿ ಸತ್ವ ಡೊಮೈನ್‌ ಕಚೇರಿ ನಿರ್ಮಾಣಕ್ಕೆ ಕೋರ್‌ಮೈಂಡ್‌ ಅನುಮತಿ ಕೋರಿ, ಅರ್ಜಿ 2013ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿತ್ತು. ಬಳಿಕ 30 ಮೀಟರ್‌ ಕೆರೆಯಂಚಿನ ಪ್ರದೇಶದ ಹೊರಗಿನ ಯೋಜನೆಗಳು ಎಂಬ ಕಾರಣಕ್ಕೆ ರಾಜ್ಯ ಮಟ್ಟದ ಪ್ರಾಧಿಕಾರ ಪರಿಸರ ಅನುಮತಿ ಯನ್ನೂ ಕೊಟ್ಟಿತ್ತು. ಈ ಮಧ್ಯೆ 2016ರ ಮೇ 4ರಂದು ಎನ್‌ಜಿಟಿ ತನ್ನ ಆದೇಶದಲ್ಲಿ ಬಫರ್‌ ವಲಯಗಳನ್ನು ನಿಗದಿಪಡಿಸಿ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೆರೆಯಂಚಿನ 75 ಮೀಟರ್‌ ಹಾಗೂ ರಾಜಕಾಲುವೆ ಅಂಚಿನ 50 ಮೀಟರ್‌ ಆಚೆವರೆಗೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತಿಲ್ಲ ಎಂಬ ಆದೇಶ ಹೊರಡಿಸಿತು. ಇದಾದ ಬಳಿಕ ನಮ್ಮ ಬೆಂಗಳೂರು ಫೌಂಡೇಶನ್‌ ಹಾಗೂ ಬೆಳ್ಳಂದೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮಂತ್ರಿ ಹಾಗೂ ಕೋರ್‌ಮೈಂಡ್‌ ಕಂಪನಿಗಳು ಪರಿಸರ ನಿಯಮಗಳನ್ನು ಮೀರಿ ಬೆಳ್ಳಂದೂರು ಮತ್ತು ಅಗರದ ಕೆರೆಗಳ ಅಂಚಿನಲ್ಲಿ ಕಟ್ಟಡ ನಿರ್ಮಿಸುತ್ತಿವೆ ಎಂದು ಎನ್‌ಜಿಟಿಗೆ ದೂರು ನೀಡಿದ್ದವು.

ಅರ್ಜಿ ಆಲಿಸಿದ ಎನ್‌ಜಿಟಿ, ರಾಜ್ಯಮಟ್ಟದ ಪ್ರಾಧಿಕಾರದ ಮೇಲ್ವಿಚಾ ರಣೆಯಲ್ಲೇ ಹೊಸ ನಿಯಮಗಳ ಅನು ಸಾರ ಕಟ್ಟಡ ನಿರ್ಮಾಣ ಮಾಡಬೇಕು ಎಂದೂ ನಿರ್ದೇಶನ ನೀಡಿತ್ತು. ಎನ್‌ಜಿಟಿಯ ಈ ಆದೇಶದ ಅನುಸಾರ ಮಂತ್ರಿ ಹಾಗೂ ಕೋರ್‌ ಮೈಂಡ್‌ ಮಾತ್ರವಲ್ಲದೇ ಇದೇ ನಿಯಮಾವಳಿ ಅನುಸಾರ ಕೆರೆ ಮತ್ತು ರಾಜಕಾಲುವೆ ಅಂಚಿನಲ್ಲಿರುವ 28 ಯೋಜನೆಗಳಿಗೆ ರಾಜ್ಯಮಟ್ಟದ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ ರೆಡ್‌ ಸಿಗ್ನಲ್‌ ತೋರಿದೆ.

ವರದಿ: ಕನ್ನಡ ಪ್ರಭ