RSS ಸಮನ್ವಯ ಬೈಠಕ್'ಗೆ ಯಡಿಯೂರಪ್ಪ, ಈಶ್ವರಪ್ಪಗೆ ಆಹ್ವಾನವಿಲ್ಲ!
ಇಂದು ಆರ್ಎಸ್ಎಸ್ ನ ಸಮನ್ವಯ ಬೈಠಕ್ ನಡೆಯಲಿದೆ. ಆದರೆ ಈ ಸಮನ್ವಯ ಬೈಠಕ್ಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ಆಹ್ವಾನವಿಲ್ಲ. ರಾಜ್ಯ ಬಿಜೆಪಿಯ ಪರವಾಗಿ ಬೈಠಕ್'ಗೆ ಇಬ್ಬರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆ ಇಬ್ಬರು ಪ್ರಮುಖರು ಯಾರು? ಬಿಜೆಪಿ ನಾಯಕರ ಬೈಠಕ್ನಿಂದ ದೂರ ಇಟ್ಟಿದ್ದೇಕೆ? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
ಬೆಂಗಳೂರು(ಜ.17): ಇಂದು ಆರ್ಎಸ್ಎಸ್ ನ ಸಮನ್ವಯ ಬೈಠಕ್ ನಡೆಯಲಿದೆ. ಆದರೆ ಈ ಸಮನ್ವಯ ಬೈಠಕ್ಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ಆಹ್ವಾನವಿಲ್ಲ. ರಾಜ್ಯ ಬಿಜೆಪಿಯ ಪರವಾಗಿ ಬೈಠಕ್'ಗೆ ಇಬ್ಬರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆ ಇಬ್ಬರು ಪ್ರಮುಖರು ಯಾರು? ಬಿಜೆಪಿ ನಾಯಕರ ಬೈಠಕ್ನಿಂದ ದೂರ ಇಟ್ಟಿದ್ದೇಕೆ? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಯಲ್ಲುಂಟಾಗಿರುವ ಗೊಂದಲಗಳ ಪರಿಣಾಮವನ್ನು ಆರ್.ಎಸ್.ಎಸ್. ಗಂಭೀರವಾಗಿ ಪರಿಗಣಿಸಿದೆ. ಇಂದಿನ ಬೈಠಕ್'ನಲ್ಲಿ ನಿಗದಿಯಂತೆ ಕರ ಸಂಘದ 40 ಸಂಘಟನೆಗಳು ಭಾಗವಹಿಸುತ್ತಿವೆ. ಈ ಪೈಕಿ ಬಿಜೆಪಿ ಕೂಡ ಭಾಗವಹಿಸ್ತಿದೆ. ಹಾಗಾದರೆ, ಬಿಜೆಪಿ ಪರವಾಗಿ ಬೈಠಕ್'ಗೆ ಹೋಗುರುವುದು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.
ಬಿಜೆಪಿ ಪರವಾಗಿ ಸಭೆಗೆ ಅರುಣ್-ಸಂತೋಷ್
ಇಂದಿನ ಬೈಠಕ್'ಗೆ ಯಡಿಯೂರಪ್ಪ, ಈಶ್ವರಪ್ಪ ಸೇರಿ ಬಿಜೆಪಿಯ ಯಾವ ನಾಯಕರಿಗೂ ಆಹ್ವಾನವಿಲ್ಲ. ಬದಲಾಗಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ಕುಮಾರ್ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ಗೆ ಆಹ್ವಾನ ಸಿಕ್ಕಿದೆ. ಈ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ನ ಗೊಂದಲಗಳಿಗೆ ಆರ್'ಎಸ್'ಎಸ್'ನ ವೇದಿಕೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎನ್ನುವ ಖಡಕ್ ಸಂದೇಶವನ್ನ ಸಂಘಪರಿವಾರ ರವಾನಿಸಿದೆ. ಇತ್ತ ಈಶ್ವರಪ್ಪ, ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ ಅಂತ ಮತ್ತೆ ಹೇಳಿದ್ದಾರೆ.
ಈವರೆಗೆ ಸಮನ್ವಯ ಬೈಠಕ್'ನಲ್ಲಿ ಬಿಜೆಪಿಯ ಸುಮಾರು 12 ಪ್ರಮುಖ ನಾಯಕರು ಭಾಗವಹಿಸುತ್ತಿದ್ದರು. ಈ ಬಾರಿ ಬಿಜೆಪಿ ನಾಯಕರನ್ನು ದೂರವಿಟ್ಟು RSS ಬೈಠಕ್ ನಡೆಸುತ್ತಿದೆ. ಇತ್ತ ಯಡಿಯೂರಪ್ಪ ಇಂದಿನ ಬೈಠಕ್'ನಲ್ಲಿ ಭಾಗವಹಿಸದಿರೋದನ್ನ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ನ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಆರ್ಎಸ್ಎಸ್ ಗಂಭೀರವಾಗಿ ಪರಿಗಣಿಸಿದೆ. ಇಂದಿನ ಬೈಠಕ್'ನಲ್ಲಿ ಈ ಬಗ್ಗೆ ಚರ್ಚೆ ನಡೆಯದಿದ್ದರೂ ಮುಂದಿನ ದಿನಗಳಲ್ಲಿ ಸಂಘ ಪರಿವಾರ ಇಬ್ಬರೂ ನಾಯಕರ ನಡುವೆ ಮಧ್ಯಸ್ಥಿಕೆ ವಹಿಸಿ ಗೊಂದಲಗಳ ಶಮನ ಯತ್ನ ನಡೆಸುವ ಸಾಧ್ಯತೆ ಇದೆ.