ರಾಮುಲು ಅಣ್ಣಾ ಟೆನ್ಷನ್ ಬೇಡ - ನಾನು ಯಾರನ್ನೂ ಖರೀದಿ ಮಾಡಲ್ಲ
‘ರಾಮುಲು ಅಣ್ಣ, ಟೆನ್ಷನ್ ಬೇಡ... ಆರಾಮವಾಗಿ ಚುನಾವಣೆ ಮಾಡೋಣ’ ಹೀಗೆಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಶ್ರೀರಾಮುಲು ಅವರಿಗೆ ಕಾಲೆಳೆದಿದ್ದಾರೆ.
ಬಳ್ಳಾರಿ: ‘ಕನಕಪುರದ ಗೌಡರು ಬಳ್ಳಾರಿ ಮತದಾರರ ಖರೀದಿಗೆ ಬಂದಿದ್ದಾರೆ’ ಎಂಬ ಶ್ರೀರಾಮುಲು ಹೇಳಿಕೆಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾವು ಯಾರನ್ನೂ ಖರೀದಿ ಮಾಡಲು ಬಂದಿಲ್ಲ ಎಂದು ಹೇಳಿದ್ದಾರೆ. ಜತೆಗೆ, ‘ರಾಮುಲು ಅಣ್ಣ, ಟೆನ್ಷನ್ ಬೇಡ... ಆರಾಮವಾಗಿ ಚುನಾವಣೆ ಮಾಡೋಣ’ ಎಂದು ಕಾಲೆಳೆದಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನಗೂ ಮತ್ತು ಶ್ರೀರಾಮುಲುಗೂ ಈ ಚುನಾ ವಣೆಯಲ್ಲಿ ಯಾವುದೇ ಪೈಪೋಟಿ ಇಲ್ಲ. ಇಲ್ಲೇನಿದ್ದರೂ ಬಿಜೆಪಿ ಅಭ್ಯರ್ಥಿ ಶಾಂತಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಹೋರಾಟ ಎಂದು ಅವರು ತಿಳಿಸಿದರು.
ಎಲ್ಲರೂ ಒಂದಾಗುತ್ತೇವೆ: ಗಟಬಂಧನ್ ಕುರಿತ ಶ್ರೀರಾಮುಲು ಹೇಳಿಕೆಗೂ ಡಿಕೆಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಗಟಬಂಧನ್ ಒಡೆದಿದೆ ಎಂದು ಹೇಳಿದ್ದು ಯಾರು? ಸಮಯ ಬಂದರೆ ಎಲ್ಲರೂ ಒಂದಾಗುತ್ತೇವೆ. ಈ ಚುನಾವಣೆಯಲ್ಲಿ ಸಿಪಿಎಂ, ಜೆಡಿಎಸ್, ರೈತ ಸಂಘಗಳು ಕಾಂಗ್ರೆಸ್ ಅನ್ನು ಬೆಂಬಲಿಸಿವೆ ಎಂದು ಶಿವಕುಮಾರ್ ಅವರು ಹೇಳಿದರು.