ಮೀಸಲಾತಿಗೆ ಆಗ್ರಹಿಸಿ ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠರು ಹೋರಾಟ ನಡೆಸಿದ ಬೆನ್ನಲ್ಲೇ ಮುಂದುವರಿದ ಸಮುದಾಯಗಳಲ್ಲಿರುವ ಬಡವರಿಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಚೆನ್ನೈ (ಡಿ.17): ಮೀಸಲಾತಿಗೆ ಆಗ್ರಹಿಸಿ ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠರು ಹೋರಾಟ ನಡೆಸಿದ ಬೆನ್ನಲ್ಲೇ ಮುಂದುವರಿದ ಸಮುದಾಯಗಳಲ್ಲಿರುವ ಬಡವರಿಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂದುವರಿದ ಸಮುದಾಯಗಳ ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ, ಮೀಸಲು ನೀಡುವ ಕುರಿತು ಪರಿಶೀಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.
ಮೇಲ್ವರ್ಗದಲ್ಲಿನ ಬಡವರನ್ನು ಈ ವರೆಗೂ ನಿರ್ಲಕ್ಷಿಸಲಾಗಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪ್ರತಿಭಟನೆಯ ಧ್ವನಿಗಳು ವ್ಯಕ್ತವಾಗಬಹುದು ಎಂಬ ಆತಂಕದಿಂದ ಈ ಸಮುದಾಯದ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ.
ಆದರೆ, ಮುಂದುರಿದ ವರ್ಗದ ಬಡವರಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದರೆ, ಸಮಾಜದ ಇತರೆ ವರ್ಗಗಳು ಅನುಭವಿಸುತ್ತಿರುವ ಮೀಸಲಾತಿಗೆ ವಿರುದ್ಧ ಎಂದು ಪರಿಭಾವಿಸಬಾರದು. ಎಲ್ಲ ಸಮುದಾಯಗಳಲ್ಲೂ ಬಡವರು ಇದ್ದಾರೆ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರಿಯಲು ಅವರಿಗೆ ಪ್ರೋತ್ಸಾಹ ನೀಡಬೇಕು ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ ಎಂದು ಹೇಳಿದೆ.
