ಕಾಂಗ್ರೆಸ್ ಗೆ ಹೊಸ ಸಾರಥಿ ಆಯ್ಕೆ ಮಾಡುವತ್ತ ಪ್ರಕ್ರಿಯೆ ಜೋರಾಗುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಸ್ಥಾನ ತೊರೆದಿದ್ದರು. ಅವರ ಜಾಗಕ್ಕೆ ಯಾರು? ಎಂಬುದನ್ನು ಈ ಸಭೆ ನಿರ್ಧಾರ ಮಾಡಲಿದೆ.
ನವದೆಹಲಿ[ಆ. 04] ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ಚರ್ಚಿಸಲು ಆಗಸ್ಟ್ 10 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆಗಸ್ಟ್ 10ರಂದು ಬೆಳಗ್ಗೆ 11 ಗಂಟೆಗೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಆಪ್ತರೆಲ್ಲಾ ಸರಣಿಯಾಗಿ ಹೊರಕ್ಕೆ: ರಾಹುಲ್ ಟೀಂ ಆಲೌಟ್?
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊದಲಿಗೆ ರಾಹುಲ್ ರಾಜೀನಾಮೆ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮಾತು ಕೇಳಿಬಂದಿದ್ದರೂ ನಂತರ ಬೇರೆ ಆಯ್ಕೆಯ ಹುಡುಕಾಟ ಆರಂಭವಾಗಿತ್ತು.
ಯಾರಾಗಬಹುದು? ಪ್ರಿಯಾಂಕಾ ವಾದ್ರಾ ಅವರ ಹೆಸರು ರೇಸ್ ನಲ್ಲಿ ಕೇಳಿ ಬಂದಿತ್ತು. ಮಲ್ಲಿಕಾರ್ಜುನ ಖರ್ಗೆ, ಎ.ಕೆ.ಆಂಟನಿ, ಸುಶೀಲ್ ಕುಮಾರ್ ಶಿಂಧೆ, ಅಶೋಕ್ ಗೆಹ್ಲೋಟ್, ಗುಲಾಂನಬಿ ಆಜಾದ್, ಶಶಿ ತರೂರ್ ಆಯ್ಕೆ ಬಗ್ಗೆಯೂ ಪಕ್ಷದ ವಲಯದಲ್ಲಿ ಆಸಕ್ತಿ ಇತ್ತು. ಹಂಗಾಮಿ ಅಧ್ಯಕ್ಷರನ್ನು ನೇಮಿಸಿ, ಪ್ರಮುಖ ನಿರ್ಧಾರ ಕೈಗೊಳ್ಳಲು ಹಿರಿಯ ನಾಯಕರ ಸಮಿತಿ ರಚಿಸುವ ಪ್ರಸ್ತಾಪವೂ ಕಾಂಗ್ರೆಸ್ ವರಿಷ್ಠರ ಮುಂದೆ ಇತ್ತು. ಸಚಿನ್ ಪೈಲಟ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಪ್ರಸ್ತಾವ ಬಂದಿತ್ತು. ಇದೀಗ ಅಂತಿಮವಾಗಿ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
