ಡಿಸಿಎಂ ಪರಮೇಶ್ವರ್ ಸ್ಥಾನಕ್ಕೆ ಕುತ್ತು ?
ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಸ್ಥಾನಕ್ಕೆ ಇದೀಗ ಕುತ್ತು ಎದುರಾಗಿದೆ. ಕಾಂಗ್ರೆಸ್ ನಲ್ಲಿಯೇ ಅವರ ಬಳಿ ಇರುವ ಕೆಲ ಪ್ರಮುಖ ಸ್ಥಾನಗಳನ್ನು ಕಿತ್ತುಕೊಳ್ಳಲು ಮಾಸ್ಟರ್ ಪ್ಲಾನ್ ನಡೆದಿದೆ.
ಬೆಂಗಳೂರು : ಪ್ರಮುಖ ಮೂರು ಖಾತೆ ಹಾಗೂ ಎರಡು ಜಿಲ್ಲೆಗಳ ಉಸ್ತುವಾರಿ ಪಡೆದಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಬಳಿ ಇರುವ ಖಾತೆಗಳನ್ನು ಕಿತ್ತುಕೊಳ್ಳಲು ಕೈ ಪಾಳಯದಲ್ಲೇ ಪೈಪೋಟಿ ಆರಂಭವಾಗಿದೆ.
ಸಿಲಿಕಾನ್ ಸಿಟಿ ಉಸ್ತುವಾರಿಗಾಗಿ ಬೆಂಗಳೂರು ಶಾಸಕರು ಭಾರೀ ಲಾಬಿ ನಡೆಸುತ್ತಿದ್ದಾರೆ. ಗೃಹ ಖಾತೆ, ಬೆಂಗಳೂರು ಅಭಿವೃದ್ಧಿ ಖಾತೆ, ಕ್ರೀಡಾ ಖಾತೆಗಳ ಜೊತೆಗೆ ಬೆಂಗಳೂರು, ತುಮಕೂರು ಜಿಲ್ಲಾ ಉಸ್ತುವಾರಿ ಹೊಣೆಯೂ ಕೂಡ ಸದ್ಯ ಪರಮೇಶ್ವರ್ ಅವರ ಬಳಿ ಇದೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಶತಾಯ ಗತಾಯ ಪರಮೇಶ್ವರ್ ಅವರಿಂದ ಬೆಂಗಳೂರು ಅಭಿವೃದ್ಧಿ ಖಾತೆ ಕೈತಪ್ಪಿಸಲು ಬೆಂಗಳೂರು ಶಾಸಕರೇ ಪ್ಲಾನ್ ಮಾಡುತ್ತಿದ್ದು, ಮೇಯರ್ ಚುನಾವಣೆ ಹತ್ತಿರವಿರುವಾಗಲೇ ಪರಂ ಗೆ ಟೆನ್ಷನ್ ನೀಡಲು ಮುಂದಾಗಿದ್ದಾರೆ.
ಪರಮೇಶ್ವರ್ ಬದಲಿಗೆ ಬೆಂಗಳೂರು ಉಸ್ತುವಾರಿ ರಾಮಲಿಂಗ ರೆಡ್ಡಿ ಅವರಿಗೆ ನೀಡಿದರೆ ಉತ್ತಮ ಎಂದು ಬಯಸುತ್ತಿದ್ದಾರೆ. ಶಾಸಕರ ರಣತಂತ್ರಕ್ಕೆ ಪರಮೇಶ್ವರ್ ಪ್ರತಿತಂತ್ರ ಹೂಡುತ್ತಿದ್ದು, ಇದೀಗ ಸಿಟಿ ರೌಂಡ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ.
ಅಲ್ಲದೇ ತುಮಕೂರು ಉಸ್ತುವಾರಿ ಹಾಗೂ ಯುವಜನ ಕ್ರೀಡೆ ಮಾತ್ರ ಬಿಟ್ಟಕೊಡಲು ಪರಮೇಶ್ವರ್ ನಿರ್ಧಾರ ಮಾಡಿದ್ದು, ಗೃಹ ಖಾತೆ, ಬೆಂಗಳೂರು ಅಭಿವೃದ್ದಿ ತಮ್ಮಲ್ಲೇ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.