ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ್ದ ಕುಂದಗೋಳ ಬಂಡಾಯ ಕೊನೆಗೂ ಶಮನವಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ಸಂಧಾನ ಫಲಕೊಟ್ಟಿದ್ದು,  ಕಾಂಗ್ರೆಸ್‌ನ ಐವರು ಬಂಡಾಯ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.

ಹುಬ್ಬಳ್ಳಿ, (ಮೇ.02): ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ‌ಯ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್​ ನಾಯಕರು ಯಶಸ್ವಿಯಾಗಿದ್ದಾರೆ. 

Add Asianetnews Kannada as a Preferred SourcegooglePreferred

ಇಂದು ಸಚಿವ ಜಮೀರ್‌ ಅಹ್ಮದ್ ಖಾನ್ ನೇತೃತ್ವದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಉಪಸ್ಥಿತಿಯಲ್ಲಿ ಅತೃಪ್ತರ ಮನವೊಲಿಕೆ ಸಕ್ಸಸ್ ಆಗಿದ್ದು, ಕಾಂಗ್ರೆಸ್‌ನ ಐವರು ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ತೆಗೆದುಕೊಂಡರು.

ಜಮೀರ್ ಮತ್ತೊಮ್ಮೆ ಟ್ರಬಲ್ ಶೂಟರ್; ಬಂಡಾಯ ಥಂಡಾ!

ಮಾಜಿ ಶಾಸಕರ ಪುತ್ರರಾದ ಚಂದ್ರಶೇಖರ್ ಜುಟ್ಟಲ್, ಸುರೇಶ್ ಸವಣೂರು, ಎಚ್.ಎಲ್. ನದಾಫ್, ಜೆ.ಡಿ. ಘೋರ್ಪಡೆ, ವಿಶ್ವನಾಥ್ ಕುಬ್ಯಾಳ ಅವರು ಇಂದು (ಗುರುವಾರ) ಕೈ ನಾಯಕರೊಂದಿಗೆ ಕುಂದಗೋಳ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಹಿಂಪಡೆದು, ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿಗೆ ಬೆಂಬಲ ಸೂಚಿಸಿದರು.

ಇದೇ ವೇಳೆ ಕಾಂಗ್ರೆಸ್​ ಪಕ್ಷದಿಂದ ಬಂಡಾಯ ಆಭ್ಯರ್ಥಿಯಾಗಿ ​ಕಣಕ್ಕಿಳಿದಿದ್ದ ಶಿವಾನಂದ ಬೆಂತೂರ್, ತಮ್ಮ ನಾಮಪತ್ರ ವಾಪಸ್​ ಪಡೆಯುವುದರೊಂದಿಗೆ ರಾಜಕೀಯ ನಿವೃತ್ತಿ ಘೋಷಿಸಿದರು. 

ಬಳಿಕ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಸೇರಿದಂತೆ ಯಾರಿಗೂ ನಾನು ಸಪೋರ್ಟ್​ ಮಾಡೋದಿಲ್ಲ. ನನಗೆ ಸಪೋರ್ಟ್​ ಮಾಡಿದವರು ಕೊನೆ ಘಳಿಗೆಯಲ್ಲಿ ನನ್ನ ಕೈ ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಸುಮಾ ವಿರುದ್ಧ ಬಿಜೆಪಿಯಿಂದ ಚಿಕ್ಕನಗೌಡ ಅಖಾಡದಲ್ಲಿದ್ದು, ಇದೇ ಮೇ 19ರಂದು ಮತದಾನ ನಡೆಯಲಿದೆ. ಇನ್ನು ಮೇ 23ರಂದು ಫಲಿತಾಂಶ ಹೊರಬೀಳಲಿದೆ.