ಹನುಮ ಜಯಂತಿ ಮೆರವಣಿಗೆಯಲ್ಲಿ ನಿಯಮ ಉಲ್ಲಂಘನೆ; ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು
ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಿಬಂಧನೆ ಉಲ್ಲಂಘನೆ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ನಿಯಮ ಉಲ್ಲಂಘನೆ ವಿಚಾರವಾಗಿ ಮೋಟಾರ್ ಕಾಯ್ದೆಯಡಿ ದೂರು ದಾಖಲು ಮಾಡಲು ಸೂಚಿಸಿದ್ದೇನೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.
ಬೆಂಗಳೂರು (ಜ.29): ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಿಬಂಧನೆ ಉಲ್ಲಂಘನೆ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ನಿಯಮ ಉಲ್ಲಂಘನೆ ವಿಚಾರವಾಗಿ ಮೋಟಾರ್ ಕಾಯ್ದೆಯಡಿ ದೂರು ದಾಖಲು ಮಾಡಲು ಸೂಚಿಸಿದ್ದೇನೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.
ಮೆರವಣಿಗೆ ವೇಳೆ ಸಂಸದ ಪ್ರತಾಪ್ ಸಿಂಹ ವಿಶೇಷ ವಾಹನ ಬಳಸಿದ್ದರು. ಮೆರವಣಿಗೆ ಅನುಮತಿ ನೀಡುವ ವೇಳೆ ವಿಶೇಷ ವಾಹನ ಬಳಸುವಂತಿಲ್ಲ ಎಂದು ನಿಬಂಧನೆ ಹಾಕಲಾಗಿತ್ತು. ಆದರೆ ನಿಬಂಧನೆ ಉಲ್ಲಂಘಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸಲು ಸೂಚಿಸಲಾಗಿದೆ.
ಇದೇ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಬಜೆಟ್'ನಲ್ಲಿ ಅನುದಾನ ಇಡಿ ಎಂದು ಮೈಸೂರು ಜಿಲ್ಲಾಧಿಕಾರಿ ರಂದೀಪ್ ಮುಖ್ಯಮಂತ್ರಿಗಳಿಗೆ ವಿಶೇಷ ಪ್ರಸ್ತಾವನೆ ನೀಡಿದ್ದಾರೆ.
ಪ್ರತಿ ವರ್ಷ ಅನುದಾನ ಬಿಡುಗಡೆ ವೇಳೆ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದರಿ ಅನುದಾನವನ್ನ ಬಜೆಟ್'ನಲ್ಲೆ ಮೀಸಲಿಡಿ. ಜೊತೆಗೆ ಕಳೆದ ವರ್ಷದ ಅನುದಾನದ ಬಾಕಿ ಸಹ ಬಿಡುಗಡೆ ಮಾಡಿ. ಕಳೆದ ಬಾರಿ ದಸರಾದ 10.45 ಕೋಟಿ ಅನುದಾನ ಬಾಕಿ ಇದೆ. ಕಳೆದ ಬಾರಿಯ ಬಾಕಿ ಹಣ ಹಾಗೂ ಈ ಬಾರಿಯ ಮುಂಗಡ ಅನುದಾನವನ್ನ ಬಜೆಟ್'ನಲ್ಲಿ ಮೀಸಲಿಡಿ ಎಂದು
ಡಿ.ರಂದೀಪ್ ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.