ಪ್ರಚೋದನಾಕಾರಿ ಭಾಷಣ ಮಾಡಿದ ಮೂವರು ನಟರ ಮೇಲೆ ದೇಶದ್ರೋಹದ ದೂರು ದಾಖಲು
ಚೆನ್ನೈ(ಸೆ.19): ಕಾವೇರಿ ಕದನ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈಗಾಗಲೇ 2 ರಾಜ್ಯಗಳಲ್ಲಿ ಬಂದ್, ಗಲಭೆ ನಡೆದು ಸಾವಿರಾರು ಕೋಟಿ ರೂಪಾಯಿ ನಷ್ಟವುಂಟಾಗಿದೆ. ಈ ನಡುವೆ ಕನ್ನಡದ ಮೂವರು ಖ್ಯಾತ ನಟರ ವಿರುದ್ಧ ಚೆನ್ನೈನಲ್ಲಿ ದೇಶದ್ರೋಹದ ದೂರು ದಾಖಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರುಗಳ ಮೇಲೆ ತಮಿಳುನಾಡಿನ ‘ತಮಿಳು ದೇಶಿಯ ಪೆರಮೈಪು’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪಿ.ಇಳಂಗೋವನ್ ಚೆನ್ನೈನ 2ನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಮಿಳರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ.
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಬಂದ್ ನಡೆದ ಸಂದರ್ಭದಲ್ಲಿ ಪುನೀತ್ ರಾಜ್’ಕುಮಾರ್, ದರ್ಶನ್ ಹಾಗೂ ಉಪೇಂದ್ರ ತಮಿಳರ ವಿರುದ್ಧ ಕನ್ನಡಿಗರನ್ನು ಪ್ರಚೋದಿಸುವ ರೀತಿಯಲ್ಲಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೆಕ್ಷನ್ 124(ಎ) ದೇಶದ್ರೋಹ, 153 ಗಲಭೆಯನ್ನು ಪ್ರಚೋದಿಸುವುದು ಹಾಗೂ 153(ಎ) ಎರಡೂ ಭಾಷಿಕರ ನಡುವೆ ಧಾರ್ಮಿಕ ಸಾಮರಸ್ಯವನ್ನು ಹದಗೆಡಿಸುವ ದೂರನ್ನು ದಾಖಲಿಸಲಾಗಿದೆ.