ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಳ ಗೆಲುವಿಗೆ ಈ ಸಭೆಯಲ್ಲಿ ರಣತಂತ್ರ ಹೆಣೆಯಲಿರುವ ಸಚಿವರು, ರಾಜ್ಯದಲ್ಲಿ ಎದುರಾಗಲಿರುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಸಿ ಪರಿಹಾರ ಸೂತ್ರ ಸಿದ್ದಪಡಿಸಲಿದ್ದಾರೆ.

ಬೆಂಗಳೂರು(ಮಾ.18):ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲು ನಾನಾ ರೀತಿಯ ಪ್ರಯತ್ನ ಮಾಡ್ತಿದ್ದಾರೆ. ಈ ಪೈಕಿ ಬಹುಮುಖ್ಯವಾಗಿ ಸಿಎಂ ಆದ ನಂತರ ಮೊಟ್ಟಮೊದಲ ಬಾರಿಗೆ ಕೆಪಿಸಿಸಿ ಕಚೇರಿಯಲ್ಲಿ ಸರ್ವಸಚಿವರ ಸಭೆ ನಡೆಸಿ ರಣತಂತ್ರ ಹೆಣೆಯಲು ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಇದೇ 19ರಂದು ಈ ಮಹತ್ವದ ಸಭೆ ನಡೆಯಲಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಳ ಗೆಲುವಿಗೆ ಈ ಸಭೆಯಲ್ಲಿ ರಣತಂತ್ರ ಹೆಣೆಯಲಿರುವ ಸಚಿವರು, ರಾಜ್ಯದಲ್ಲಿ ಎದುರಾಗಲಿರುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಸಿ ಪರಿಹಾರ ಸೂತ್ರ ಸಿದ್ದಪಡಿಸಲಿದ್ದಾರೆ.

ಇನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳ ದೃಷ್ಟಿಯಿಂದ ಸಚಿವರು ಇನ್ನು ಮುಂದೆ ಜಿಲ್ಲೆಗಳಲ್ಲಿ ಹೆಚ್ಚಿನ ಸಮಯ ಕಳೆದು ಕೆಲಸ ಮಾಡಲು ಸರ್ವಸಚಿವರ ಸಭೆಯಲ್ಲಿ ಸೂಚಿಸಲಿದ್ದಾರೆ. ಸಭೆಯಲ್ಲಿ ಎರಡೂ ಕ್ಷೇತ್ರಗಳ ಉಪಚುನಾವಣೆ ಗೆಲುವು ಹಾಗೂ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ವಹಿಸಬೇಕಾದ ಪೂರ್ವಭಾವಿ ಮುಂಜಾಗ್ರತೆಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲಿದೆ.