ಜನವರಿ7 ರಂದು ಬೆಂಗಳೂರು ಚಿತ್ರಸಂತೆ: ‘ಮನೆಗೊಂದು ಕಲಾಕೃತಿ’ ಈ ಬಾರಿಯ ಶೀರ್ಷಿಕೆ
ಐದು ಲಕ್ಷ ಜನರ ನಿರೀಕ್ಷೆ: ಕಳೆದ ವರ್ಷದ ಚಿತ್ರಸಂತೆ ನಾಲ್ಕು ಲಕ್ಷ ಜನರ ಭೇಟಿಗೆ ಸಾಕ್ಷಿಯಾಗಿತ್ತು. ಈ ವೇಳೆ ಐದು ಕೋಟಿ ರು.ಗಳಿಗೂ ಹೆಚ್ಚು ವಹಿವಾಟು ನಡೆದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ವಹಿವಾಟು ನಡೆಯುವ ಸಾಧ್ಯತೆ ಇದೆ. ಐದು ಲಕ್ಷಕ್ಕೂ ಹೆಚ್ಚು ಜನ ಬರಬಹುದೆಂದು ಪರಿಷತ್ತು ನಿರೀಕ್ಷಿಸುತ್ತಿದೆ.
ಕಲಾವಿದರು ಹಾಗೂ ಕಲಾ ರಸಿಕರ ನಡುವೆ ಬಾಂಧವ್ಯ ಬೆಸೆಯುವ, ವೈವಿಧ್ಯಮ ಮಾದರಿಗಳ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವಿಶಿಷ್ಟ ವೇದಿಕೆ ನಿರ್ಮಿಸುತ್ತಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುವ ‘ಚಿತ್ರ ಸಂತೆ’ ಜನವರಿ ಏಳರಂದು ನಡೆಯಲಿದ್ದು, ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಹರಿದು ಬಂದಿವೆ.
ಈ ಬಾರಿ ಕರ್ನಾಟಕ ಚಿತ್ರಕಲಾ ಪರಿಷತ್ತು ‘ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ 15ನೇ ವರ್ಷದ ‘ಚಿತ್ರಸಂತೆ’ಗೆ ವೇದಿಕೆ ಸಜ್ಜುಗೊಳಿಸುತ್ತಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಿಗದಿತ ದಿನದೊಳಗೆ ನೋಂದಣಿ ಮಾಡಿಕೊಂಡವರಿಗೆ ಮಳಿಗೆಗಳ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ದೇಶದ ವಿವಿಧ ರಾಜ್ಯಗಳ ಕಲಾವಿದರಿಂದ ಅರ್ಜಿಗಳು ಬರುತ್ತವೆ. ಅವುಗಳನ್ನೆಲ್ಲ ಪುರಸ್ಕರಿಸುವುದು ಕಷ್ಟ ಸಾಧ್ಯ. ಅಕ್ಕಪಕ್ಕದ ರಸ್ತೆಯ ಇಕ್ಕೆಲಗಳಲ್ಲಿ ಮಳಿಗೆಗಳನ್ನು ಹಾಕಿದರೆ ಚಿತ್ರಸಂತೆ ನೈಜ ಸೊಗಸನ್ನು ಕಳೆದುಕೊಳ್ಳುತ್ತದೆ. ಹಾಗಾಗಿ 1500 ಕಲಾವಿದರಿಗೆ ಮಾತ್ರ ಮಳಿಗೆ ವ್ಯವಸ್ಥೆ ನೀಡಲಾಗುತ್ತದೆ ಎನ್ನುತ್ತಾರೆ ಪರಿಷತ್ತಿನ ಅಧಿಕಾರಿಗಳು.
ಐದು ಲಕ್ಷ ಜನರ ನಿರೀಕ್ಷೆ: ಕಳೆದ ವರ್ಷದ ಚಿತ್ರಸಂತೆ ನಾಲ್ಕು ಲಕ್ಷ ಜನರ ಭೇಟಿಗೆ ಸಾಕ್ಷಿಯಾಗಿತ್ತು. ಈ ವೇಳೆ ಐದು ಕೋಟಿ ರು.ಗಳಿಗೂ ಹೆಚ್ಚು ವಹಿವಾಟು ನಡೆದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ವಹಿವಾಟು ನಡೆಯುವ ಸಾಧ್ಯತೆ ಇದೆ. ಐದು ಲಕ್ಷಕ್ಕೂ ಹೆಚ್ಚು ಜನ ಬರಬಹುದೆಂದು ಪರಿಷತ್ತು ನಿರೀಕ್ಷಿಸುತ್ತಿದೆ. ರಾಜ್ಯದ ಕಲಾವಿದರ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ನಾನಾ ಭಾಗಗಳ ಕಲಾವಿದರು ಹೆಸರು ನೋಂದಾಯಿಸಿದ್ದಾರೆ. ಚಿತ್ರಸಂತೆಯಲ್ಲಿ ಭಾಗವಹಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದರಿಂದ ಪರಿಷತ್ತಿನ ಒಳ ಆವರಣದಲ್ಲಿನ ಪ್ರದರ್ಶನ ನೋಡಲು ಕಳೆದ ವರ್ಷ ನೂರಾರು ಜನರಿಗೆ ಸಾಧ್ಯವಾಗಿರಲಿಲ್ಲ. ಜನಸಂದಣಿ ನಿಯಂತ್ರಣಕ್ಕಾಗಿ ಈ ಸಲ ಪರಿಷತ್ತಿನ ಬಯಲು ರಂಗಮಂದಿರದಲ್ಲಿ ವಾದ್ಯ ಸಂಗೀತ, ಜಾನಪದ, ಶಾಸ್ತ್ರೀಯ ಸಂಗೀತ ಏರ್ಪಡಿಸಲಾಗಿದೆ.
ಹಳೆಯ ಕಲಾಕೃತಿಗಳ ಪ್ರದರ್ಶನ: ಪರಿಷತ್ತಿನಲ್ಲಿ ಮೂರು ದಶಕಗಳಿಗೂ ಅಧಿಕ ವರ್ಷದ ಅಮೂಲ್ಯವಾದ ಕಲಾಕೃತಿಗಳನ್ನು ಸಂಗ್ರಹಿಸಲಾಗಿದೆ. ಚಿತ್ರಸಂತೆ ಪ್ರಯುಕ್ತ ಕಲಾವಿದರಾದ ಜಯರಾಂ ಪಾಟೀಲ್, ಸುನೀಲ್ದಾಸ್, ಎಸ್.ಜಿ. ವಾಸುದೇವ್, ಜೆ.ಎಸ್. ಖಂಡೇರಾವ್, ಜತೀನ್ ದಾಸ್, ಮನುಪರೇಕ್ ಸೇರಿದಂತೆ ದೇಶದ ಹಿರಿಯ ಕಲಾವಿದರ 100 ಕಲಾಕೃತಿಗಳ ಚಿತ್ರಕಲಾ ಪ್ರದರ್ಶನವನ್ನು ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಏರ್ಪಡಿಸಲಾಗುವುದು ಎಂದು ಪ್ರೊ.ಜೆ.ಎಂ. ಕಮಲಾಕ್ಷಿ ತಿಳಿಸಿದ್ದಾರೆ.