Asianet Suvarna News Asianet Suvarna News

ಕನ್ನಡಪ್ರಭ’ದ ಸ್ವಚ್ಛ ಸೇನಾನಿಗೆ ರಾಷ್ಟ್ರ ಪ್ರಶಸ್ತಿ

 ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ್‌ ಯೋಜನೆಯಡಿ 100 ದಿನಗಳ ‘ಸಮ್ಮರ್‌ ಇಂಟರ್ನ್‌ಶಿಪ್‌ ಕ್ಯಾಂಪ್‌’ನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಉಡುಪಿ ಜಿಲ್ಲೆ ಚೇರ್ಕಾಡಿ ಗ್ರಾಮದ ಸಮೃದ್ಧಿ ಮಹಿಳಾ ಮಂಡಳಿಗೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ.

Cherkady Grama Samruddhi Mahila Mandali Got National Award
Author
Bengaluru, First Published Sep 29, 2018, 10:07 AM IST

ಉಡುಪಿ :  ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ್‌ ಯೋಜನೆಯಡಿ 100 ದಿನಗಳ ‘ಸಮ್ಮರ್‌ ಇಂಟರ್ನ್‌ಶಿಪ್‌ ಕ್ಯಾಂಪ್‌’ನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಉಡುಪಿ ಜಿಲ್ಲೆ ಚೇರ್ಕಾಡಿ ಗ್ರಾಮದ ಸಮೃದ್ಧಿ ಮಹಿಳಾ ಮಂಡಳಿಗೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ.

ಮೇ.1ರಿಂದ ಜು.31ರವರೆಗೆ ದೇಶಾದ್ಯಂತ ಈ ‘ಸಮ್ಮರ್‌ ಇಂಟರ್ನ್‌ ಶಿಪ್‌ ಕ್ಯಾಂಪ್‌’ ನಡೆಸಲಾಗಿತ್ತು. ಇದರಲ್ಲಿ ದೇಶಾದ್ಯಂತದಿಂದ ಹತ್ತಾರು ಸಾವಿರ, ನಮ್ಮ ರಾಜ್ಯದಲ್ಲಿ ನೂರಾರು, ಉಡುಪಿ ಜಿಲ್ಲೆಯಲ್ಲಿ 24 ಸಂಘಟನೆಗಳು ಭಾಗವಹಿಸಿದ್ದವು. ಅವುಗಳನ್ನೆಲ್ಲಾ ಹಿಂದಿಕ್ಕಿ ಸಮೃದ್ಧಿ ಮಹಿಳಾ ಮಂಡಳಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ.

ಅ.2ರಂದು ಪ್ರಧಾನಿಯಿಂದ ಪ್ರದಾನ:  ಅ.2ರ ಗಾಂಧಿ ಜಯಂತಿಯಂದು ಸ್ವಚ್ಛತಾ ಅಭಿಯಾನದ ರೂವಾರಿ ಪ್ರಧಾನಿ ಮೋದಿ ಅವರೇ ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 2 ಲಕ್ಷ ರುಪಾಯಿ ನಗದು ಬಹುಮಾನ ಒಳಗೊಂಡಿದೆ.

ಚೇರ್ಕಾಡಿಯ ಸಮೃದ್ಧಿ ಮಹಿಳಾ ಮಂಡಳಿ ಸಾಧನೆಯನ್ನು ಗಮನಿಸಿ ಶುಕ್ರವಾರವಷ್ಟೇ ಕನ್ನಡಪ್ರಭ ‘ಚೇರ್ಕಾಡಿ: 5 ತಿಂಗಳಲ್ಲಿ ಸ್ವಚ್ಛತಾ ಕ್ರಾಂತಿಯನ್ನೇ ನಡೆಸಿದರು!’ ಎಂಬ ವಿಶೇಷ ವರದಿ ಪ್ರಕಟಿಸಿತ್ತು.

ಸ್ವಚ್ಛತಾ ಜಾಗೃತಿ: ಸಮೃದ್ಧಿ ಮಹಿಳಾ ಮಂಡಳಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ 30 ಸಾವಿರ ಮತ್ತು ರಾಜ್ಯ ಮಟ್ಟದಲ್ಲಿ 50 ಸಾವಿರ ರು. ನಗದು ಬಹುಮಾನಗಳನ್ನು ಗೆದ್ದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಈ ಮಹಿಳಾ ಮಂಡಳಿಯಿಂದಾಗಿ ಇಂದು ಚೇರ್ಕಾಡಿ ಗ್ರಾಮದಲ್ಲಿ ಸ್ವಯಂ ಸ್ವಚ್ಛತೆಯ ಕ್ರಾಂತಿಯೇ ನಡೆದಿದೆ. ಸುಮಾರು 8000ದಷ್ಟುಜನಸಂಖ್ಯೆ ಇರುವ ಊರಿನ ಜನರು ತಂತಮ್ಮ ಮನೆಯ ಪರಿಸರವನ್ನು ತಾವೇ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾರೆ, ಪ್ಲಾಸ್ಟಿಕ್‌ ಬಳಕೆ ಬಹಳ ಕಡಿಮೆಯಾಗಿದೆ, ಎಲ್ಲರೂ ಪೇಪರ್‌, ಬಟ್ಟೆಚೀಲ ಬಳಸುತ್ತಾರೆ, ಮನೆಯಲ್ಲಿ ಉಳಿದ ತರಕಾರಿ ತ್ಯಾಜ್ಯವನ್ನು ಎಸೆಯದೆ ಅದರಿಂದ ಗೊಬ್ಬರ ತಯಾರಿಸಿ ಮನೆಯ ಕೈತೋಟಕ್ಕೆ ಬಳಸುತ್ತಾರೆ. ಬಯಲು ಶೌಚಾಲಯವಂತೂ ಇಲ್ಲವೇ ಇಲ್ಲ, ಬಳಸಿ ಎಸೆದ ಪ್ಲಾಸ್ಟಿಕ್‌ ಬಾಟಲುಗಳನ್ನು ತೂಗು ಹಾಕುವ ಹೂವಿನ ಕುಂಡಗಳಾಗಿ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ.

ಊರಿಗಾಗಿ ಮಾಡಿರುವ ಸಾಧನೆ ಇದು

ನಾವು 15 ಮಂದಿ ಪ್ರಶಸ್ತಿ ಪಡೆಯುವುದಕ್ಕೆ ಶನಿವಾರ ದೆಹಲಿಗೆ ಹೋಗುತ್ತಿದ್ದೇವೆ. ಪ್ರಶಸ್ತಿ ಬಂದಿರುವುದು ನಮೆಗೆಲ್ಲರಿಗೂ ಬಹಳ ರೋಮಾಂಚನವನ್ನುಂಟು ಮಾಡಿದೆ. ಪ್ರಶಸ್ತಿಗಾಗಿ ನಾವು ಈ ಕೆಲಸ ಮಾಡಿಲ್ಲ, ಊರಿಗಾಗಿ ಮಾಡಿದೆವು, ಇವತ್ತು ಚೇರ್ಕಾಡಿ ಎಂಬ ಪುಟ್ಟಊರು ಸ್ವಚ್ಛತೆಗಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ ಎನ್ನುವುದು ಬಹಳ ಹೆಮ್ಮೆಯನ್ನುಂಟು ಮಾಡುತ್ತಿದೆ.

-ಪ್ರಸನ್ನ ಪ್ರಸಾದ್‌ ಭಟ್‌, ಅಧ್ಯಕ್ಷೆ

Follow Us:
Download App:
  • android
  • ios