ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ತನ್ನ ವಕೀಲರ ಮೂಲಕ ಬೆಂಗಳೂರಿನ 33ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದ.

ಬೆಂಗಳೂರು(ಅ.04): ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾವಿಷ್ಣು ಮಡಿಕೇರಿಯಲ್ಲಿರುವ ತನ್ನ ಅತಿಥಿಗೃಹದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

Add Asianetnews Kannada as a Preferred SourcegooglePreferred

ಸೆ.27ರ ರಾತ್ರಿ 12.30ರ ಸುಮಾರಿಗೆ ಪಾನಮತ್ತನಾಗಿ ಬೆಂಜ್​​ ಕಾರು ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್‌ ಎಂಡ್‌ ವೃತ್ತದಲ್ಲಿ ಓಮ್ನಿ ವ್ಯಾನ್‌'ಗೆ ಡಿಕ್ಕಿ ಮಾಡಿದ್ದ. ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದರು. ಎಸ್‌'ಯುವಿ ಕಾರಲ್ಲಿ 110 ಗ್ರಾಂ ಗಾಂಜಾ ಸಹ ಪತ್ತೆಯಾಗಿತ್ತು. ನಂತರ ತನ್ನ ಕುಟುಂಬದ ಮಾಲೀಕತ್ವದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ, ಸೆ.29ರ ಬೆಳಗಿನ ಜಾವ ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದಿಂದ ಪರಾರಿಯಾಗಿದ್ದ. ವಿಚಾರಣೆಯ ಸಂದರ್ಭದಲ್ಲಿ ಅಪಘಾತದ ವೇಳೆಯಲ್ಲಿ ಯಾರ್ಯಾರು ಇದ್ದರೂ ಎನ್ನುವ ಕುರಿತು ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಕನ್ನಡದ ಇಬ್ಬರು ನಟರ ಹೆಸರೂ ಕೂಡಾ ತಳಕು ಹಾಕಿಕೊಂಡಿತ್ತು. ಹೀಗಾಗಿ ಈ ಪ್ರಕರಣ ಸಾಕಷ್ಟು ಗಮನ ಸೆಳೆದಿತ್ತು.

ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ತನ್ನ ವಕೀಲರ ಮೂಲಕ ಬೆಂಗಳೂರಿನ 33ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಬುಧವಾರಕ್ಕೆ ಮುಂದೂಡಿದ್ದರು. ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಸ್ನೇಹಿತನ ಮೂಲಕ ಪೊಲೀಸರಿಗೆ ಕರೆ ಮಾಡಿಸಿದ್ದ ಆತ, ತಾನು ಮಡಿಕೇರಿಯಲ್ಲಿರುವುದಾಗಿ ಹಾಗೂ ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಕೂಡಲೇ ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ನೇತೃತ್ವದ ತಂಡ ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದೆ.

ಇಷ್ಟು ದಿನ ಹೈದರಾಬಾದ್, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಈತ, ಸೋಮವಾರ ರಾತ್ರಿ ಮಡಿಕೇರಿಗೆ ವಾಪಸಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.