ಮಂಡ್ಯ(ಸೆ. 21): ಕಾವೇರಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ರೈತ ಹೋರಾಟಗಾರ ಜಿ.ಮಾದೇಗೌಡರ ವಿರುದ್ಧ ಪ್ರತಿಭಟನಾಕಾರರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ. ಶಾಸಕರ ರಾಜೀನಾಮೆ ವಿಚಾರವಾಗಿ ಮಾದೇಗೌಡರ ಮಾತು ಪ್ರತಿಭಟನಾಕಾರರಿಗೆ ಅಸಮಾಧಾನ ತಂದಿತು. ಕಾವೇರಿ ಹೋರಾಟದಲ್ಲಿ ಬೂಟಾಟಿಕೆ ರಾಜಕೀಯ ಮಾಡುತ್ತೀರಾ ಎಂದು ಮಾದೇಗೌಡರ ವಿರುದ್ಧ ಜನರು ಕಿಚ್ಚು ಹೊರಹಾಕಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾದೇಗೌಡರು ಹೇಳಿದ್ದೇನು?
ರಾಜೀನಾಮೆ ನೀಡಬಯಸುವ ಜನಪ್ರತಿನಿಧಿಗಳು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಬದಲು ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸಿ ಎಂದು ಮಾದೇಗೌಡರು ಇಂದು ಕರೆ ಕೊಟ್ಟರು. ಸ್ಪೀಕರ್'ಗೆ ಕೊಟ್ಟರೆ ನಿಮ್ಮ ರಾಜೀನಾಮೆ ಅಂಗೀಕಾರವಾಗಿಬಿಡಬಹುದು. ಅದರ ಬದಲು ತಮ್ಮ ತಮ್ಮ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡಿ ಎಂದು ಮಾದೇಗೌಡರು ಸಲಹೆ ನೀಡಿದರು. ಹಿರಿಯ ರೈತ ಮುಖಂಡರ ಈ ಮಾತು ಪ್ರತಿಭಟನಾಕಾರರನ್ನು ಕೆರಳಿಸಿತು. ರಾಜೀನಾಮೆಯ ನಾಟಕವಾಡಿ ಬೂಟಾಟಿಕೆ ರಾಜಕಾರಣ ಮಾಡುತ್ತಿದ್ದೀರಾ ಎಂದು ಪ್ರತಿಭಟನಾಕಾರರು ಮಾದೇಗೌಡರ ವಿರುದ್ಧ ಸಿಟ್ಟು ತೋರ್ಪಡಿಸಿದರು.