ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಬಿಜೆಪಿಗೆ ಸಿಕ್ಕಿದೆ ಒಂದು ಹೊಸ ಅಸ್ತ್ರ
ಲೋಕಾಯುಕ್ತರ ಮೇಲೆ ಹಾಡಹಗಲೇ ಅವರ ಕಚೇರಿಯಲ್ಲಿ ಹತ್ಯೆ ಯತ್ನ ನಡೆದ ಘಟನೆಯು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆಪಾದನೆ ಮಾಡುತ್ತಿದ್ದ ಪ್ರತಿಪಕ್ಷ ಬಿಜೆಪಿಗೆ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಪ್ರಬಲ ಅಸ್ತ್ರ ಕೊಟ್ಟಂತಾಗಿದೆ.
ಬೆಂಗಳೂರು: ಲೋಕಾಯುಕ್ತರ ಮೇಲೆ ಹಾಡಹಗಲೇ ಅವರ ಕಚೇರಿಯಲ್ಲಿ ಹತ್ಯೆ ಯತ್ನ ನಡೆದ ಘಟನೆಯು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆಪಾದನೆ ಮಾಡುತ್ತಿದ್ದ ಪ್ರತಿಪಕ್ಷ ಬಿಜೆಪಿಗೆ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಪ್ರಬಲ ಅಸ್ತ್ರ ಕೊಟ್ಟಂತಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನೇ ಮುಂದಿಟ್ಟು ಕೊಂಡು ಬಿಜೆಪಿ ಕಳೆದ ಹಲವು ದಿನಗಳಿಂದ ವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಲೇ ಬಂದಿತ್ತು.
ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರವಷ್ಟೇ ಅಂತ್ಯಗೊಂಡ ಸುರಕ್ಷಾ ಯಾತ್ರೆಯ ಮುಖ್ಯ ಗುರಿಯೂ ಇದೇ ಆಗಿತ್ತು. ಜತೆಗೆ ಸದ್ಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ ಅಭಿಯಾನದ ಉದ್ದೇಶವೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದು. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಲೋಕಾಯುಕ್ತರ ಹತ್ಯೆ ಯತ್ನ ಪ್ರಕರಣ ಬಿಜೆಪಿಯ ಆಪಾದನೆಗೆ ಪುಷ್ಟಿ ನೀಡುವಂತಿದೆ. ಈ ಪ್ರಕರಣವನ್ನು ಬಲವಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.