ಸುಷ್ಮಾ, ಜೇಟ್ಲಿ ಸಾವಿಗೆ ವಿರೋಧ ಪಕ್ಷಗಳ ಮಾಟ ಮಂತ್ರ ಕಾರಣ: BJP MP
ಒಂದೇ ವರ್ಷದಲ್ಲಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ಭಾರೀ ಆಘಾತವಾಗಿದೆ. ಇವರುಗಳ ಸಾವಿಗೆ ವಿರೋಧ ಪಕ್ಷಗಳೇ ಕಾರಣ ಎಂದು ಬಿಜೆಪಿ ಎಂಪಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ನವದೆಹಲಿ, [ಆ.26]: ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೇಂದ್ರ ಮಾಜಿ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸಾವಿಗೆ ವಿರೋಧ ಪಕ್ಷಗಳ ಮಾಟ ಮಂತ್ರವೇ ಕಾರಣ ಎಂದು ಭೋಪಾಲ್ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲೇ ಬಿಜೆಪಿಯ ಇಬ್ಬರು ಮಹಾನ್ ನಾಯಕರ ಸಾವು ಸಂಭವಿಸಿದೆ. ಇದಕ್ಕೆಲ್ಲಾ ವಿಪಕ್ಷಗಳ ಮಾಟ ಮಂತ್ರ ಕಾರಣ. ಬಿಜೆಪಿ ವಿರುದ್ಧ ವಿಪಕ್ಷಗಳು ದುಷ್ಟ ಶಕ್ತಿಗಳ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.
ಒಂದೇ ವರ್ಷದಲ್ಲಿ ಐವರು ಅತಿರಥ ಮಹಾರಥರನ್ನ ಕಳೆದುಕೊಂಡ ಬಿಜೆಪಿ
ನಿಮ್ಮ ಕೆಟ್ಟ ದಿನಗಳು ಶುರುವಾಗಿದ್ದು, ವಿರೋಧಪಕ್ಷಗಳು ಬಿಜೆಪಿ ಮೇಲೆ ದುಷ್ಟ ಶಕ್ತಿಯ ಪ್ರಯೋಗ ಮಾಡಲಿವೆ ಎಂದು ಈ ಹಿಂದೆ ಮಹಾರಾಜ್ ಜೀ ನನಗೆ ಹೇಳಿದ್ದರು. ಆದರೆ ಅದಕ್ಕೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ನಮ್ಮ ಪಕ್ಷದ ಮಹಾನ್ ನಾಯಕರಿಬ್ಬರು ಸಾವನ್ನಪ್ಪಿದ ಮೇಲೆ ಅದರ ಬಗ್ಗೆ ನಾನು ಯೋಚಿಸಬೇಕಾಗಿದೆ ಎಂದು ಹೇಳಿದರು.