ಗಂಡ ಹೆಂಡತಿ ನಡುವೆ ನಡೆದ ಬಿರಿಯಾನಿ ಕಲಹ ಹೆಂಡತಿಯನ್ನು ಮನೆ ತೊರೆಯುವಂತೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಮನೆಗೆ ವಾಪಸಾಗಿದ್ದಾರೆ. 

ಬೆಂಗಳೂರು: ಬಿರಿಯಾನಿ ವಿಷಯಕ್ಕೆ ಪತಿ ಮೇಲೆ ಕೋಪಗೊಂಡು ಮನೆ ತೊರೆದಿದ್ದ 6 ತಿಂಗಳ ಗರ್ಭಿಣಿಯೊಬ್ಬರು, ಈ ಗಲಾಟೆ ಠಾಣೆ ಮೆಟ್ಟೆಲೇರಿದ ವಿಷಯ ಗೊತ್ತಾಗಿ ಮರಳಿ ಗೂಡು ಸೇರಿರುವ ಕುತೂಹಲಕಾರಿ ಘಟನೆ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ರಾಜು ಸರ್ಕಾರ್ ಮತ್ತು ಅವರ ಪತ್ನಿ ಅನಿತಾ ಸರ್ಕಾರ್ ನಡುವೆ ‘ಬಿರಿಯಾನಿ’ ವಿವಾದವಾಗಿದ್ದು, ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ವಿರಸ ಶಮನವಾಗಿದೆ.

Add Asianetnews Kannada as a Preferred SourcegooglePreferred

ಆ.27ರಂದು ಊಟಕ್ಕೆ ಹೋಟೆಲ್‌ನಿಂದ ರಾಜು ಬಿರಿಯಾನಿ ತಂದಿದ್ದರು. ಆಗ ಬಿರಿಯಾನಿ ಸೇವನೆಗೆ ಕೋಪಗೊಂಡು ಅನಿತಾ ತವರು ಮನೆ ಸೇರಿದ್ದರು. ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಗಂಗಮ್ಮನಗುಡಿ ಠಾಣೆಯಲ್ಲಿ ರಾಜು ದೂರು ಸಲ್ಲಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡ ವಿಷಯ ಗೊತ್ತಾಗಿ ಅನಿತಾ ಮರಳಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶ ಮೂಲದ ರಾಜು, ಎಂಟು ವರ್ಷಗಳಿಂದ ಕಮ್ಮಗೊಂನಡಹಳ್ಳಿಯಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ಬಿರಿಯಾನಿ ವಿಚಾರವು ಅವರ ಮಧ್ಯೆ ವಿರಸಕ್ಕೆ ಕಾರಣವಾಗಿದೆ. ಅಂದು ರಾತ್ರಿ ಊಟಕ್ಕೆಂದು ರಾಜು, ಹೋಟೆಲ್‌ನಿಂದ ಬಿರಿಯಾನಿ ತಂದಿದ್ದರು. ಆಗ ಮನೆಯಲ್ಲಿ ತಂದೆ-ಮಗ ಬಿರಿಯಾನಿ ತಿನ್ನುತ್ತಿದ್ದನ್ನು ಕಂಡು ಅನಿತಾ, ನನಗೆ ಬಿರಿಯಾನಿ ವಾಸನೆ ಆಗುವುದಿಲ್ಲ. ನಿಮಗೆ ಸಾವಿರ ಸಲ ಹೇಳಿದರೆ ಮತ್ತೆ ಬಿರಿಯಾನಿ ತಂದಿದ್ದೀರಾ ಎಂದು ಗಲಾಟೆ ಮಾಡಿದ್ದರು. ಆಗ ಸತಿ-ಪತಿ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ಘಟನೆಯಿಂದ ಕೋಪಗೊಂಡ ಅನಿತಾ, ಮರುದಿನ ಮನೆಯಲ್ಲಿದ್ದ ಹಣ ತೆಗೆದುಕೊಂಡು ಊರಿಗೆ ಹೋಗಿದ್ದರು. 

(ಸಾಂದರ್ಬಿಕ ಚಿತ್ರ)