ಬೆಂಗಳೂರು ವೈದ್ಯನ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ವೈದ್ಯಬ ಪತ್ನಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ.
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ‘ಮಂತ್ರಿ ಆಲ್ಫೈನ್’ ಅಪಾರ್ಟ್ಮೆಂಟ್ನ ಐದನೇ ಮಹಡಿಯಿಂದ ಬಿದ್ದು ಸೋನಾಲ್ (25) ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತಿ ಅವಿನಾಶ್ ಕೊಲೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಮತ್ತೊಂದೆಡೆ ಸೋನಾಲ್ ಕಳ್ಳತನ ಮಾಡುವ ಉದ್ದೇಶದಿಂದ ತಮ್ಮ ಫ್ಲ್ಯಾಟ್ಗೆ ಬಂದಿದ್ದರು ಎಂದು ಆರೋಪಿಸಿ ಸೋನಾಲ್ ಸ್ನೇಹಿತೆಯ ಪತಿ ಪ್ರಸಾದ್ ದೂರು ನೀಡಿದ್ದಾರೆ.
ಎರಡು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಾ.ಅವಿನಾಶ್ ಕುಟುಂಬ ಮತ್ತು ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ಪ್ರಸಾದ್ ಅವರ ಕುಟುಂಬ ಉತ್ತರಹಳ್ಳಿಯ ಮಂತ್ರಿ ಆಲ್ಫೈನ್ ಅಪಾರ್ಟ್ಮೆಂಟ್ನ ಐದನೇ ಮಹಡಿಯಲ್ಲಿ ನೆಲೆಸಿದೆ. ಅವಿನಾಶ್ ಅವರು 505 ನಂಬರಿನ ಫ್ಲಾಟ್ನಲ್ಲಿ ನೆಲೆಸಿದ್ದರೆ, ಪ್ರಸಾದ್ ಕುಟುಂಬ 501 ನಂಬರಿನ ಫ್ಲಾಟ್ನಲ್ಲಿ ನೆಲೆಸಿದೆ. ಭಾನುವಾರ ರಾತ್ರಿ ಸೋನಾಲ್ ಅವರು ಪ್ರಸಾಧ್ ಅವರಿಗೆ ಸೇರಿದ ಫ್ಲಾಟ್ 501 ನಂಬರಿನ ಫ್ಲಾಟ್ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು.
ಅಲ್ಲದೆ, ಸೋನಾಲ್ ಅವರ ಒಳ ಉಡುಪಿನಲ್ಲಿ ಪ್ರಸಾದ್ ಅವರ ಮನೆಯ ಬೀರುವಿನ ಕೀ ಮತ್ತು ಪ್ರಸಾದ್ ಪತ್ನಿಗೆ ಸೇರಿದ ಆಭರಣಗಳು ಪತ್ತೆಯಾಗಿದ್ದವು. ಇದು ಪೊಲೀಸರಿಗೆ ಅನುಮಾನ ಬರುವಂತೆ ಮಾಡಿದೆ. ನಾಲ್ಕು ದಿನಗಳ ಹಿಂದೆ ಪ್ರಸಾದ್ ಅವರ ಮನೆಯ ಬೀರುವಿನ ಕೀ ನಾಪತ್ತೆಯಾಗಿತ್ತು. ಎಲ್ಲೋ ಬಿದ್ದಿರಬಹುದು ಎಂದು ಪ್ರಸಾದ್ ಕುಟುಂಬ ಸುಮ್ಮನಾ ಗಿತ್ತು. ಮೃತ ಸೋನಾಲ್ ಬಳಿ ಬೀರುವಿನ ಕೀ ಪತ್ತೆಯಾಗಿತ್ತು. ಸೋನಾಲ್ ಸಾವನ್ನಪ್ಪಿದ ವೇಳೆ ಪ್ರಸಾದ್ ಕುಟುಂಬ ಭಾನುವಾರ ಸಂಜೆ ಅಪಾರ್ಟ್ಮೆಂಟಿನ ಟೆರೇಸ್ನಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವಕ್ಕೆ ತೆರಳಿತ್ತು.
ಈ ವೇಳೆ ಪ್ರಸಾದ್ ಫ್ಲ್ಯಾಟ್ನ ಹೊರ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿಕೊಂಡು ಹೋಗಿದ್ದರು. ಈ ವೇಳೆ ತಂದೆಯವರು ಫ್ಲ್ಯಾಟ್ಗೆ ಹಿಂದಿರುಗಿದ್ದರು. ತಂದೆಯವರನ್ನು ಕಂಡು ಸೋನಾಲ್ ಆತಂಕದಿಂದ ಫ್ಲ್ಯಾಟ್ನ ಕಿಟಕಿಯಿಂದ ಕೆಳಗೆ ಜಿಗಿದಿದ್ದಾರೆ ಎಂದು ಪ್ರಸಾದ್ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಪತ್ನಿಯನ್ನು ಕೊಲೆ ಮಾಡಲಾಗಿದೆ ಸೋನಾಲ್ ಪತಿ ಅವಿನಾಶ್ ದೂರು ನೀಡಿದ್ದಾರೆ. ಪತ್ನಿ ಬಳಿ ಸಿಕ್ಕಿರುವ ಚಿನ್ನಾಭರಣ ಹಾಗೂ ಕೀ ತಮ್ಮ ಬೀರುವಿನದ್ದೆ ಎಂದು ಹೇಳಿಕೆ ನೀಡಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.