"ಶಾಂತಿಯೇ ಜೀವನ ಎಂದು ಸಂದೇಶ ಕೊಟ್ಟಿದ್ದ ಬಸವಣ್ಣನವರ ಭಕ್ತರಿಂದ ಇಂತಹ ಕೃತ್ಯಗಳು ನಡೆಯುವುದು ಸರಿಯಲ್ಲ. ಲಿಂಗಾಯತರಂತೆ ವೀರಶೈವರೂ ಹೋರಾಟಕ್ಕಿಳಿಯುತ್ತಾರೆ; ನಮ್ಮ ಶಕ್ತಿ ಪ್ರದರ್ಶನಕ್ಕೆ ನಿಲ್ಲಲು ಸಿದ್ಧವಿದ್ದಾರೆ; ಮಾತೆ ಮಹಾದೇವಿ ಕ್ಷಮೆಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಡೋಳ ಮಠದ ರಾಜಶೇಖರ್ ಶಿವಾಚಾರ್ಯ ಶ್ರೀಗಳು ಎಚ್ಚರಿಕೆ ನೀಡಿದರು.

ಬೀದರ್(ಜುಲೈ 30): ರಂಭಾಪುರಿ ಶ್ರೀಗಳಿಗೆ ಮಾತೆ ಮಹಾದೇವಿ ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ಪಂಚಚಾರ್ಯ ಮಠಾಧೀಶರು, ವಿರಕ್ತ ಮಠದ ಸ್ವಾಮೀಜಿಗಳು ಹಾಗೂ ವೀರಶೈವ ಮಠಾಧೀಶರು ಪ್ರತಿಭಟನೆ ನಡೆಸಿದರು. ಮಾತೆ ಮಹಾದೇವಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

"ಲಿಂಗಾಯತ ಮಠಾಧೀಶರು ಸಮಾಜದಲ್ಲಿ ಶಾಂತಿಗೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸನಾತನ ಕಾಲದಿಂದಲೂ ವೀರಶೈವರು, ಪಂಚಾಚಾರ್ಯ ಮಠಾಧೀಶರಿದ್ದಾರೆ. ರಂಭಾಪುರಿ ಶ್ರೀಗಳ ವಿರುದ್ಧ ಪ್ರತಿಭಟನೆ ಮಾಡಿ ಅವರ ಫೋಟೋ ಸುಟ್ಟು ಅವರನ್ನ ಅಪಮಾನ ಮಾಡಿದ್ದಾರೆ. ಇದು ಲಿಂಗಾಯತರ ಸಂಸ್ಕೃತಿಯಾ?" ಎಂದು ಕಡೋಳಶ್ರೀಗಳು ಪ್ರಶ್ನಿಸಿದರು.

"ಶಾಂತಿಯೇ ಜೀವನ ಎಂದು ಸಂದೇಶ ಕೊಟ್ಟಿದ್ದ ಬಸವಣ್ಣನವರ ಭಕ್ತರಿಂದ ಇಂತಹ ಕೃತ್ಯಗಳು ನಡೆಯುವುದು ಸರಿಯಲ್ಲ. ಲಿಂಗಾಯತರಂತೆ ವೀರಶೈವರೂ ಹೋರಾಟಕ್ಕಿಳಿಯುತ್ತಾರೆ; ನಮ್ಮ ಶಕ್ತಿ ಪ್ರದರ್ಶನಕ್ಕೆ ನಿಲ್ಲಲು ಸಿದ್ಧವಿದ್ದಾರೆ; ಮಾತೆ ಮಹಾದೇವಿ ಕ್ಷಮೆಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಡೋಳ ಮಠದ ರಾಜಶೇಖರ್ ಶಿವಾಚಾರ್ಯ ಶ್ರೀಗಳು ಎಚ್ಚರಿಕೆ ನೀಡಿದರು.

ಇದೇ ವೇಳೆ, ಬೀದರ್​, ಕಲಬುರಗಿ, ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವೀರಶೈವರ ಸಮಾವೇಶ ನಡೆಸುವ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಕಡೋಳ ಮಠದ ಶ್ರೀಗಳು ತಿಳಿಸಿದರು.

ಏನಿದು ವಿವಾದ?
ಲಿಂಗಾಯತ ಮತವನ್ನ ಪ್ರತ್ಯೇಕ ಧರ್ಮವನ್ನಾಗಿ ಮಾಡಬೇಕೆನ್ನುವ ಕೂಗು ಕೇಳಿಬರುತ್ತಿದೆ. ರಾಜ್ಯ ಸರಕಾರವೇ ಖುದ್ದಾಗಿ ಈ ವಿಚಾರವನ್ನು ಪ್ರಸ್ತಾಪಿಸಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಆದರೆ, ಇದು ಎರಡು ಥರದ ವಿವಾದವಾಗಿ ಮಾರ್ಪಟ್ಟಿದೆ. ಒಂದನೆಯದು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಯ ವಿಚಾರವಾದರೆ, ಮತ್ತೊಂದು, ವೀರಶೈವ ಪಂಥವನ್ನ ಬಿಟ್ಟು ಲಿಂಗಾಯತಕ್ಕೆ ಮಾತ್ರವೇ ಪ್ರತ್ಯೇಕ ಧರ್ಮವೆಂದು ಪ್ರತಿಪಾದನೆಯಾಗುತ್ತಿರುವುದು. ವೀರಶೈವರು ಮತ್ತು ಲಿಂಗಾಯತ ಎರಡನ್ನೂ ಪ್ರತ್ಯೇಕ ಮಾಡಬಾರದು ಎಂಬುದು ವೀರಶೈವ ಮಠಾಧೀಶರುಗಳ ಆಗ್ರಹವಾಗಿದೆ. ವೀರಶೈವವು ಸನಾತನ ಧರ್ಮದ ಜೊತೆ ಬೆಸೆದುಕೊಂಡಿದ್ದರೆ, ಲಿಂಗಾಯತವು ಬಸವಣ್ಣನವರ ಬೋಧನೆಯನ್ನಷ್ಟೇ ಪಾಲಿಸುವ ಪಂಥವಾಗಿದೆ ಎಂಬುದು ಲಿಂಗಾಯತ ಪರ ಇರುವವರ ವಾದವಾಗಿದೆ.

- ಲಿಂಗೇಶ್​ ಮರಕಲೆ, ಸುವರ್ಣ ನ್ಯೂಸ್​, ಬೀದರ್​