ಬೆಂಗಳೂರಿನಲ್ಲಿ ರಾತ್ರಿ ಜೆಸಿಬಿ ಸದ್ದು: ಕ್ವೀನ್ಸ್ ರಸ್ತೆಯಲ್ಲಿದ್ದ ಶಕ್ತಿ ದೇವಸ್ಥಾನ ಹಾಗೂ ಚರ್ಚ್ ತೆರವು
ರಾತ್ರೋ ರಾತ್ರಿ ಬಿಬಿಎಂಪಿ ಅದಿಕಾರಿಗಳು ಜೆಸಿಬಿ ತಂದು ದೇವಸ್ಥಾನ ಹಾಗೂ ಚರ್ಚ್'ನ್ನು ತೆರವುಗೊಳಿಸಿರುವ ಘಟನೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು(ಮೇ.13): ರಾತ್ರೋ ರಾತ್ರಿ ಬಿಬಿಎಂಪಿ ಅದಿಕಾರಿಗಳು ಜೆಸಿಬಿ ತಂದು ದೇವಸ್ಥಾನ ಹಾಗೂ ಚರ್ಚ್'ನ್ನು ತೆರವುಗೊಳಿಸಿರುವ ಘಟನೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ.
ಕಳೆದ ಮೂವತ್ತು ವರ್ಷಗಳಿಂದ ಇದ್ದ ಅಮ್ಮ ಶಕ್ತಿ ದೇವಸ್ಥಾನ ಹಾಗು ಹಿಂಬದಿಯಲ್ಲಿದ್ದ ಚರ್ಚ್ ಅನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಗಿದೆ. ಜೆಸಿಬಿ ಶಬ್ಧ ಕೇಳಿಸುತ್ತಿದ್ದಂತೆ ಸ್ಥಳೀಯರೆಲ್ಲರೂ ಮನೆಯಿಂದ ಹೊರಗಡೆ ಬಂದು ಗಲಾಟೆ ಮಾಡಲು ಮುಂದಾದಾಗ ಪೊಲೀಸರು ಅವರನ್ನು ತಡೆದು ಕಾರ್ಯಚರಣೆಗೆ ನೆರವು ಮಾಡಿಕೊಟ್ಟಿದ್ದಾರೆ. ಇನ್ನು1976 ರಲ್ಲಿ ಡಾ ನಾಗರಾಜು ಎಂಬುವವರಿಗೆ ಸೇರಿದ 19 ಸಾವಿರ ಚದರ ವಿಸ್ತೀರ್ಣದ ಸುಮಾರು ಮೂವತ್ತು ಕೋಟಿ ಬೆಲೆ ಬಾಳುವ ಈ ಜಾಗವನ್ನು ಆಸ್ಪತ್ರೆ ಕಟ್ಟುವ ಸಲುವಾಗಿ ಬಿಟ್ಟುಕೊಡಲಾಗಿತ್ತಂತೆ. ಅದಾದ ಬಳಿಕ ಇಲ್ಲಿನ ಸ್ಥಳೀಯರು ಇಲ್ಲಿ ದೇವಸ್ಥಾನ ನಿರ್ಮಿಸಿ ಆಸ್ಪತ್ರೆ ಕಟ್ಟುವುದಕ್ಕೆ ಅಡ್ಡಿ ಮಾಡುತ್ತಿದ್ದರೆಂದು ಬಿಬಿಎಂಪಿ, ಸ್ವತಃ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿತ್ತು.
ತಕ್ಷಣ ಜಾಗವನ್ನು ಖಾಲಿ ಮಾಡುವಂತೆ ಈ ಹಿಂದೆ ಬಿಬಿಎಂಪಿ ನೋಟಿಸ್ ಅನ್ನು ಸಹ ಜಾರಿ ಮಾಡಿದ್ದರಂತೆ. ಬಳಿಕ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೆ ತಡರಾತ್ರಿ ಬಂದು ದೇವಸ್ಥಾನ ಮತ್ತು ಚರ್ಚ್'ನ್ನು ಕೆಡವಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಹೈಗ್ರೌಂಡ್ ಪೊಲೀಸ್ ಠಾಣೆಗೆಮುಂದೆ ಪ್ರತಿಭಟನೆ ನಡೆಸಿದರು.