ನೋವು ತಡೆಯಲಾಗುತ್ತಿಲ್ಲ, ದಯವಿಟ್ಟು ನನ್ನ ಕೈ ಕತ್ತರಿಸಿ: 'ಟ್ರೀ ಮ್ಯಾನ್'
25 ಸರ್ಜರಿಗಳಾದರೂ ಕಾಯಿಲೆಯಿಂದ ಮುಕ್ತಿ ಇಲ್ಲ| ಇನ್ನು ನನ್ನಿಂದ ನೋವು ಸಹಿಸಲಾಗುವುದಿಲ್ಲ, ದಯವಿಟ್ಟು ನನ್ನ ಕೈ ಕತ್ತರಿಸಿ| ಇದು 'ಟ್ರೀ ಮ್ಯಾನ್' ಖ್ಯಾತಿಯ ಅಬುಲ್ ಬಜನ್ದಾರ್ ಅಳಲು|
ಢಾಕಾ[ಜೂ.25]: ದೇಹದಲ್ಲಿ ಮರದ ತೊಗಟೆಯಂತ ರಚನೆಯು ಹೊರಹೊಮ್ಮುವುದರಿಂದ 'ಟ್ರೀ ಮ್ಯಾನ್' ಎಂದೇ ಫೇಮಸ್ ಆಗಿರುವ ಬಾಂಗ್ಲಾ ನಾಗರಿಕ ಅಬುಲ್ ಬಜನ್ದಾರ್ ತನ್ನ ಕೈಗಳನ್ನು ಕತ್ತರಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ಮೂಲಕ ತನಗಾಗುತ್ತಿರುವ ನೋವು ಕೊಂಚ ಮಟ್ಟಿಗಾದರೂ ಕಡಿಮೆಯಾಗಲಿ ಎಂದಿದ್ದಾನೆ.
ಅಬುಲ್ ವಿಚಿತ್ರ ಹಾಗೂ ಬಹಳ ಅಪರೂಪದ ಕಾಯಿಲೆಗೆ ಗುರಿಯಾಗಿದ್ದಾನೆ. ಆತನನ್ನು ಆವರಿಸಿಕೊಂಡ ಕಾಯಿಲೆಯಿಂದಾಗಿ, ಆತನ ಕೈ-ಕಾಲುಗಳಲ್ಲಿ ಮರದ ತೊಗಟೆಯಂತ ಆಕೃತಿ ಹುಟ್ಟಿಕೊಳ್ಳುತ್ತಿವೆ. 2016ರಿಂದ ಈವರೆಗೂ ಅಬುಲ್ ಗೆ ಬರೋಬ್ಬರಿ 25 ಆಪರೇಷನ್ ಗಳಾಗಿವೆ. ಈ ಕಾಯಿಲೆಯನ್ನು ಮಣಿಸಲು ತಾವು ಯಶಸ್ವಿಯಾಗಿದ್ದೇವೆಂದು ವೈದ್ಯರು ಭಾವಿಸಿದ್ದರು. ಆದರೆ 2018ರ ಮೇ ತಿಂಗಳಲ್ಲಿ ನಡೆದ ಸರ್ಜರಿ ಬಳಿಕ ಅಬುಲ್ ಮತ್ತೆ ತಮ್ಮ ಕ್ಲಿನಿಕ್ ಗೆ ತಲುಪಿದಾಗ ವೈದ್ಯರಿಗೆ ಏನೂ ತೋಚದಾಗಿದೆ.
'ಟ್ರೀ ಮ್ಯಾನ್' ಎಂದೇ ಪರಿಚಿತನಾಗಿರುವ ಈ ವ್ಯಕ್ತಿಗೆ ವಿಚಿತ್ರ ರೋಗ; ವೈದ್ಯಲೋಕಕ್ಕೆ ಸವಾಲು
ಒಂದು ಮಗುವಿನ ತಂದೆ, ಅಬುಲ್ ಆರೋಗ್ಯ ದಿನೇ ದಿನೇ ಬಿಗಡಾಯಿಸುತ್ತಿರುವುದನ್ನು ಮನಗಂಡ ವೈದ್ಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಮತ್ತೆ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ ಅಬುಲ್ ದೇಹದ ಮೇಲೆ ಈ ಮೊದಲಿಗಿಂತ ದೊಡ್ಡ ಮರದಂತಹ ರಚನೆಗಳು ಹುಟ್ಟಿಕೊಂಡಿರುವುದೇ ವೇದ್ಯರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ತನ್ನ ನೋವನ್ನು ವೈದ್ಯರಲ್ಲಿ ತೋಡಿಕೊಂಡಿರುವ ಅಬುಲ್ 'ಇದರಿಂದಾಗುತ್ತಿರುವ ನೋವು ಇನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಕೈಗಳನ್ನು ದಯವಿಟ್ಟು ಕತ್ತರಿಸಿ ಇದರಿಂದ ನೋವಿನಿಂದ ಬಿಡುಗಡೆ ಸಿಗಬಹುದು' ಎಂದಿದ್ದಾರೆ. ಅಬುಲ್ ತಾಯಿ ಕೂಡಾ ಮಗನನ್ನು ಸಮರ್ಥಿಸಿಕೊಂಡಿದ್ದು, 'ಅವನ ಕೈಗಳನ್ನು ಕತ್ತರಿಸುವುದರಿಂದ ನೋವಾದರೂ ಕಡಿಮೆಯಾಗಬಹುದು. ಈಗ ಅವನು ನರಕದ ನೋವು ಅನುಭವಿಸುತ್ತಿದ್ದಾನೆ' ಎಂದಿದ್ದಾರೆ.
ಅಬುಲ್ ಮನವಿ ಆಲಿಸಿರುವ ವೈದ್ಯರು 'ಆತ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಆದರೆ ಆತನಿಗೆ ಏನು ಮಾಡಿದರೆ ಸೂಕ್ತವೆಂದು ನಮಗನಿಸುತ್ತದೋ ಅದರಂತೆ ನಾವು ನಡೆದುಕೊಳ್ಳುತ್ತೇವೆ' ಎಂದಿದ್ದಾರೆ.
ಅಬುಲ್ ಬಜಾನ್ದಾರ್ Epidermodysplasia Verruciformis ಎಂಬ ಕಾಯಿಲೆಗೀಡಾಗಿದ್ದಾನೆ. ಇದನ್ನು 'ಟ್ರೀ ಮ್ಯಾನ್ ಸಿಂಡ್ರೋಮ್' ಎಂದೂ ಕರೆಯಲಾಗುತ್ತದೆ. ಇದು ಅತ್ಯಂತ ಅಪರೂಪದ ಕಾಯಿಲೆಯಾಗಿದೆ. ವಿಶ್ವದಲ್ಲಿ ಅರ್ಧ ಡಜನ್ ಗೂ ಕಡಿಮೆ ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.