ಬೆಂಗಳೂರು - ಮಂಗಳೂರು ನಡುವೆ ಸಂಪರ್ಕ ಸಂಪೂರ್ಣ ಸ್ಥಗಿತ
ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆರ್ಭಟಿಸುತ್ತಿದೆ. ಇದರಿಂದ ಹಲವೆಡೆ ಭೂಮಿ ಕುಸಿದಿದ್ದು ಬೆಂಗಳೂರು ಮಂಗಳೂರು ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಮಂಗಳೂರು [ಆ.10]: ಭೂಕುಸಿತ, ಪ್ರವಾಹದಿಂದಾಗಿ ಬೆಂಗಳೂರು- ಮಂಗಳೂರು ನಡುವಿನ 3 ಪ್ರಮುಖ ಸಂಪರ್ಕ ರಸ್ತೆಗಳು ಹಾಗೂ ಇರುವ ರೈಲು ಮಾರ್ಗ ಕೂಡ ಶುಕ್ರವಾರ ಬಂದ್ ಆಗಿದೆ. ಈಗ ಉಳಿದಿರುವ ಏಕೈಕ ಮಾರ್ಗವೆಂದರೆ ಬಜೆಗೋಳಿ- ಶೃಂಗೇರಿ ಮಾರ್ಗವಾಗಿ ಸಾಗುವ ಎಸ್.ಕೆ.ಬಾರ್ಡರ್ನಲ್ಲೂ ವಾಹನ ಸಂಚಾರ ಪ್ರವಾಹದಿಂದಾಗಿ ಕಷ್ಟಎನ್ನುವಂತಾಗಿದೆ.
ಸಕಲೇಶಪುರದ ದೋಣಿಗಲ್ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ಸಂಜೆಯೇ ವಾಹನ ಸಂಚಾರ ಬಂದ್ ಆಗಿತ್ತು. ಹಾಸನ ಜಿಲ್ಲಾಡಳಿತವು ಈ ಮಾರ್ಗದಲ್ಲಿ ಆ.12ರ ವರೆಗೆ ವಾಹನ ಸಂಚಾರ ನಿಷೇಧಿಸಿದೆ.
ಇನ್ನೊಂದು ಕಡೆ ಚಾರ್ಮಾಡಿ ಘಾಟ್ನಲ್ಲೂ ಪದೇ ಪದೆ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಕೊಡಗಿನ ಮೂಲಕ ಬೆಂಗಳೂರು ತಲುಪಲು ಇದ್ದ ಏಕೈಕ ಪ್ರಮುಖ ರಸ್ತೆಯಾದ ಮಾಣಿ- ಮೈಸೂರು ರಸ್ತೆ ಹಾದು ಹೋಗುವ ಪಿರಿಯಾಪಟ್ಟಣ- ಕುಶಾಲನಗರ ಸಮೀಪ ಕಾವೇರಿ ನದಿ ಮೂರು ಅಡಿ ಎತ್ತರಕ್ಕೆ ಹರಿಯುತ್ತಿದ್ದು, ಈ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಸುಬ್ರಹ್ಮಣ್ಯದ ಸಮೀಪದ ಸಿರಿಬಾಗಿಲಲ್ಲಿ ಪದೇ ಪದೆ ಸಂಭವಿಸಿದ ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ಈಗಾಗಲೇ ರದ್ದುಗೊಳಿಸಲಾಗಿದೆ.
ಸದ್ಯಕ್ಕೆ ಉಡುಪಿ- ಮಾರ್ಗವಾಗಿ ಸಂಚರಿಸಬಹುದಾದರೂ ಬೆಂಗಳೂರು ತಲುಪಲು 18 ಗಂಟೆ ಬೇಕಾಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿನಿಂದ ಉಳಿದೆಡೆ ವಿಮಾನ ಸಂಪರ್ಕವೂ ಅಸ್ತವ್ಯಸ್ತಗೊಂಡಿದೆ.