ನಾನು ಪ್ರಾಣ ಬಿಡುವ ಮೊದಲು ನನ್ನ ಕೊನೆ ಆಸೆ ಈಡೇರಿಸಿ ಎಂದು ಮನವಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಹಾಗಾದ್ರೆ ದೇವೇಗೌಡರ ಕೊನೆ ಆಸೆ ಏನು? ಇಲ್ಲಿದೆ ನೋಡಿ.

ರಾಮನಗರ, (ಅ.30): ನನಗೆ ಜೀವನದ ಅಂತ್ಯದಲ್ಲಿ ಪ್ರಾದೇಶಿಕ ಪಕ್ಷಗಳೆಲ್ಲ ಒಂದಾಗಿ ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಎಂಬ ಬಹುದೊಡ್ಡ ಆಕಾಂಕ್ಷೆಯಿದ್ದು, ಆ ಮೂಲಕ ನೆಮ್ಮದಿಯಿಂದ ಪ್ರಾಣಬಿಡಬೇಕು ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ರಾಮನಗರದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಜಾತ್ಯಾತೀತ ಬದ್ಧತೆಯುಳ್ಳ ಪಕ್ಷಗಳು ಒಂದುಗೂಡಬೇಕು. ಇದು ನನ್ನ ಕೊನೆಯ ಆಸೆ ಎಂದರು.

ಕಾಂಗ್ರೆಸ್ ಸೇರಿ 13 ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದರಿಂದಲೇ ನಾನು ಪ್ರಧಾನ ಮಂತ್ರಿಯಾಗಿದ್ದೆ. ಇದರಲ್ಲಿ ದೈವದ ಲೀಲೆಯೂ ಇದೆ. ಈಗ ಅದೇ ಪಕ್ಷದ ಮುಖಂಡರು ಪ್ರಬಲವಾಗಿ ಬೆಳೆದಿದ್ದಾರೆ ಎಂದು ಹೇಳಿದ್ದಾರೆ.

ವಿಧಾನ ಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೂ ಕಾಂಗ್ರೆಸ್ ನಮಗೆ ಅವಕಾಶವನ್ನು ಕೊಟ್ಟಿದೆ ಎಂದು ಹೇಳಿದ ಎಚ್ ಡಿ ದೇವೇಗೌಡರು ತಾವು ಪ್ರಧಾನಿಯಾದಾಗ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿದ್ದನ್ನು ಮೆಲುಕು ಹಾಕಿದರು.