ಮತ್ತೆ ಜಾರಕಿಹೊಳಿ ಸಹೋದರರಿಗೆ ಹೆಬ್ಬಾಳ್ಕರ್ ಎಚ್ಚರಿಕೆ?
ಸುಖಾಸುಮ್ಮನೇ ನನ್ನನ್ನು ಯಾರಾದರೂ ಕೆಣಕಿದರೆ ಸುಮ್ಮನಿರುವುದೂ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೊಳಿ ಸಹೋದರರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ: ಪಂಚಮಸಾಲಿ ಸಮಾಜದ ದಿಟ್ಟಹೆಣ್ಣು ಮಗಳು ನಾನು. ನಾನಾಗಿ ಯಾರ ಸುದ್ದಿಗೂ ಹೋಗಲ್ಲ. ಸುಖಾಸುಮ್ಮನೇ ನನ್ನನ್ನು ಯಾರಾದರೂ ಕೆಣಕಿದರೆ ಸುಮ್ಮನಿರುವುದೂ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೊಳಿ ಸಹೋದರರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಹರಿಹರದಲ್ಲಿ ನಡೆದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಡಾ.ಮಹಾಂತ ಶಿವಾಚಾರ್ಯ ಶ್ರೀಗಳ ಜಯಂತಿಯಲ್ಲಿ ಮಾತನಾಡಿ, ವೀರ ರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಹ ಬೆಳಗಾವಿಯವರು. ಹೆಣ್ಣು-ಗಂಡು ಸಮಾನವಾಗಿ ಬೆಳೆಸಿದ ನೆಲ ಬೆಳಗಾವಿ ಎಂದು ಗುಡುಗಿದರು.
ಬೆಳಗಾವಿ ರಾಜಕೀಯ ಸದ್ಯಕ್ಕೆ ತಣ್ಣಗಾಗಿದೆ. ಕಾಂಗ್ರೆಸ್ ವರಿಷ್ಠರು ಇಲ್ಲಿಗೆ ಬಂದು, ನಮ್ಮೆಲ್ಲರ ಜೊತೆಗೆ ಮಾತನಾಡಿ ಎಲ್ಲಾ ವಿಚಾರಕ್ಕೂ ಅಂತ್ಯ ಹಾಡಿದ್ದಾರೆ. ನಾನು ಬೇರೆಯವರ ಮನೆ ಇಣುಕಿ ನೋಡುವುದಿಲ್ಲ. ನನ್ನ ಮನೆಯಲ್ಲಿ ನನಗೆ ಜೀವನ ಮಾಡಲು ಬಿಡಿ. ನನ್ನ ತಂಟೆಗೆ ಬಂದರೆ ಸುಮ್ಮನಿರುವವಳೂ ನಾನಲ್ಲ. ಬಹುತೇಕ ಕಡೆ ನನ್ನ ಕಾರಣದಿಂದಾಗಿ ಬೆಳಗಾವಿ ಹೆಣ್ಣು ಮೆಟ್ಟಿದ ನಾಡು ಎಂಬುದಾಗಿಯೂ ಜನ ಮಾತನಾಡುತ್ತಿದ್ದಾರೆ. ಅಂತಹ ವೀರ ರಾಣಿ ಕಿತ್ತೂರು ಚನ್ನಮ್ಮನ ಸಮಾಜದ ದಿಟ್ಟಹೆಣ್ಣು ಮಗಳು ನಾನು ಎಂದು ಯಾರ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು.
ಸಂಜಯ್ ಅಣ್ಣನಿಗೆ ನಾನು ಉತ್ತರ ಕೊಡಲ್ಲ: ಲಕ್ಷ್ಮೀ
‘ಅಣ್ಣನವರ ಮಾತು ಮಾತಿಗೂ ನಾನು ಉತ್ತರ ಕೊಡೋದಿಲ್ಲ. ನಾಲ್ಕು ತಿಂಗಳ ಹಿಂದೆಯೇ ಕ್ಷೇತ್ರದ ಜನ ಉತ್ತರ ಕೊಟ್ಟಿದ್ದಾರೆ. ಇನ್ನೂ ಉತ್ತರ ಬೇಕೆಂದರೆ, ನಾಲ್ಕೂವರೆ ವರ್ಷದ ಮೇಲೆ ನಾನೇ ಉತ್ತರ ನೀಡುತ್ತೇನೆ’ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಜಕಾರಣಿಗಳೂ ಸೇರಿದಂತೆ ಎಲ್ಲರಿಗೂ ಅಣ್ಣನವರ ಭಾಷೆ, ಸಂಸ್ಕೃತಿ ಬಗ್ಗೆ ಗೊತ್ತಿದೆ. ಒಂದು ವೇಳೆ ಉತ್ತರ ಬೇಕೆಂದರೆ ನಾಲ್ಕೂವರೆ ವರ್ಷದ ನಂತರ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ ಎಂದು ತಿಳಿಸಿದ್ದಾರೆ.
ಸಮಯ ಬಂದಾಗ ಆಮಿಷದ ವಿಚಾರಕ್ಕೆ ಉತ್ತರ: ಬಿಜೆಪಿಯವರು .30 ಕೋಟಿ ಹಾಗೂ ಸಚಿವ ಸ್ಥಾನದ ಆಮಿಷವನ್ನು ತಮಗೆ ಒಡ್ಡಿದ್ದ ಬಗ್ಗೆ ನನ್ನ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನನಗೆ ಅಭಿಮಾನವಿದೆ. ಸಮಯ ಬಂದಾಗ ಬಿಜೆಪಿಯ ಆಮಿಷದ ವಿಚಾರಕ್ಕೆ ಉತ್ತರಿಸುವೆ ಎಂದು ತಿಳಿಸಿದರು.