SIR ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅಕ್ರಮ ನಡೆಯುತ್ತಿವೆ. ಹೀಗಾಗಿ ಈಗ ಆಗಿರುವ ಪ್ರಕ್ರಿಯೆಯನ್ನು ರದ್ದು ಮಾಡಿ, ಹೊರರಾಜ್ಯದ ದಕ್ಷ ಅಧಿಕಾರಿಗೆ ಉಸ್ತುವಾರಿ ನೀಡಲಿ ಎಂದು ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.05): ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅಕ್ರಮ ನಡೆಯುತ್ತಿವೆ. ಹೀಗಾಗಿ ಈಗ ಆಗಿರುವ ಪ್ರಕ್ರಿಯೆಯನ್ನು ರದ್ದು ಮಾಡಿ, ಹೊರರಾಜ್ಯದ ದಕ್ಷ ಅಧಿಕಾರಿಗೆ ಉಸ್ತುವಾರಿ ನೀಡಲಿ ಎಂದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. ಎಸ್ಐಆರ್ ನಡೆಸುತ್ತಿರುವುದು ರಾಜ್ಯ ಸರ್ಕಾರವಲ್ಲ, ಚುನಾವಣಾ ಆಯೋಗ. ಕುಮಾರಸ್ವಾಮಿ ಅವರು ಬೇಕಾದರೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಇಲ್ಲವೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೋಗಿ ದೂರು ಕೊಡಲಿ ಎಂದು ಯು.ಟಿ. ಖಾದರ್ ಅವರು ಎಚ್.ಡಿ.ಕೆ ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆ ನಡೆಸಲು ಕೊಡಗಿಗೆ ಆಗಮಿಸಿದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. SIR ನಡೆಸುವುದು ರಾಜ್ಯ ಸರಕಾರದ ಜವಾಬ್ದಾರಿ ಅಲ್ಲ, ಅದು ಚುನಾವಣಾ ಆಯೋಗದ ಕೆಲಸ. ನಾವು ಜನರಿಗೆ ಕೇವಲ ಜನಜಾಗೃತಿ ಮಾಡುತ್ತಿದ್ದೇವೆ. ಸರಕಾರ ತನ್ನ ಜವಾಬ್ದಾರಿಯನ್ನು ಸಮಪರ್ಕವಾಗಿ ನಡೆಸುತ್ತಿದೆ ಎಂದು ಮಡಿಕೇರಿಯಲ್ಲಿ ಹೇಳಿದ್ದಾರೆ. ಇನ್ನು ಪೇಮೆಂಟ್ ಗಾಗಿ ಸಚಿವ ಸಂಪುಟ ಇನ್ನೂ ವಿಸ್ತರಣೆಯಾಗಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿರುವುದಕ್ಕೆ ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಿಎಂ, ಹೈಕಮಾಂಡ್ ತೀರ್ಮಾನ. ಅಲ್ಲಿಯವರಗೆ ನಾವು ಡಬ್ಬಲ್ ಕೆಲಸ ಮಾಡುತ್ತೇವೆ. ಜನರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳುತ್ತೇವೆ. ಆದರೆ ವಿಪಕ್ಷ ನಾಯಕರು ನಮ್ಮನ್ನು ಶ್ಲಾಘನೆ ಮಾಡಲು ಸಾಧ್ಯವಿಲ್ಲ. ಟೀಕೆ ಮಾಡುವುದೇ ಅವರಿಗೆ ಆಕ್ಸಿಜನ್ ಅಲ್ಲವೇ. ಟೀಕೆ ಮಾಡದಿದ್ದರೆ ವಿಪಕ್ಷ ಬದುಕಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಒಂದು ತಿಂಗಳು ಯಾವುದೇ ಸಚಿವರೇ ಇರಲಿಲ್ಲ. ಆದೂ ಕೂಡ ಆಗ ಅತೀ ವೃಷ್ಟಿಯಾಗಿ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಆಗಿತ್ತು.
ಸಚಿವ ಸಂಪುಟ ವಿಸ್ತರಣೆ ಆಗಬೇಕಾದರೆ ಸಾಕಷ್ಟು ಸಾಮಾಜಿಕ ವಿಚಾರಗಳಿರುತ್ತವೆ. ಅದನ್ನು ನೋಡಿ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜನರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಕೊಡಗು ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯನ್ನು ಉಸ್ತುವಾರಿ ಸಚಿವ ಯು.ಟಿ. ಖಾದರ್ ರಜಾ ದಿನವಾಗಿರುವ ಭಾನುವಾರ ರಾತ್ರಿಯೂ ನಡೆಸಿದರು. ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗಹಿಸಿದ ಅವರು ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಕಟ್ಟು ನಿಟ್ಟಿನ ಸೂಚನೆ
ಜಿಲ್ಲೆಯ ಕೆಲವೆಡೆ ವಿಪರೀತ ಸುರಿಯುತ್ತಿದೆ. ಇನ್ನು ಕೆಲವು ಭಾಗದಲ್ಲಿ ಮಳೆಯೇ ಇಲ್ಲದ ಸ್ಥಿತಿ ಇದೆ. ಹೀಗಿರುವ ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಅಧಿಕಾರಿಗಳು ಎರಡನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಅವಧಿಗೆ ಎಷ್ಟು ಮಳೆಯಾಗಬೇಕಾಗಿತ್ತು, ಎಷ್ಟು ಆಗಿದೆ. ಎಷ್ಟು ಮಳೆ ಕೊರತೆಯಾಗಿದೆ, ಬಿತ್ತನೆ ಎಷ್ಟು ಆಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ಶೇಕರಣೆ ಇರುವ ಯೂರಿಯಾ, ಗೊಬ್ಬರ ಮುಂತಾದವುಗಳ ಬಗ್ಗೆಯೂ ಮಾಹಿತಿ ಪಡೆದಕೊಂಡರು.


