ಹೊಸ ಅಧ್ಯಕ್ಷರ ಬಗ್ಗೆ ಅಪಸ್ವರ, ರಾಜ್ಯ ರೈತ ಸಂಘ ಇಬ್ಭಾಗ?
ರಾಜ್ಯದಲ್ಲಿ ರೈತ ಪರ ಹೋರಾಟದ ದನಿ ಆಗಬೇಕಿದ್ದ.. ರೈತರನ್ನು ಒಗ್ಗೂಡಿಸಿ ಒಂದೇ ವೇದಿಕೆಗೆ ಕರೆ ತರಬೇಕಿದ್ದ ಸಂಘಟನೆಗಳಲ್ಲೇ ಕಚ್ಚಾಟ ಶುರುವಾಗಿದೆ.
ಮೈಸೂರು[ಫೆ.07] ಮತ್ತೆ ಇಬ್ಭಾಗದ ಹಾದಿಯಲ್ಲಿ ರಾಜ್ಯ ರೈತ ಸಂಘ ಬಂದು ನಿಂತಿದೆ. ಬಡಗಲಪುರ ನಾಗೇಂದ್ರ ರೈತ ಸಂಘ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಅಪಸ್ವರ ಶುರುವಾಗಿದೆ.
ಕೆ.ಎಸ್. ಪುಟ್ಟಣ್ಣಯ್ಯ ನಿಧನ ಬಳಿಕ ನಡೆದ ಆಯ್ಕೆಯಲ್ಲಿ ಪುಟ್ಟಣ್ಣಯ್ಯ ಬಣಕ್ಕೆ ನಿಷ್ಠರಾಗಿದ್ದ ಬಡಗಲಪುರ ನಾಗೇಂದ್ರ ನೇಮಕವಾಗಿದ್ದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುಟುಂಬವನ್ನು ಹೊರಗಿಟ್ಟು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಆರೋಪ ಸಹ ಕೇಳಿ ಬಂದಿದೆ.
ಪಚ್ಚೆ ಹಾಗೂ ಚುಕ್ಕಿ ನಂಜುಂಡಸ್ವಾಮಿಗೆ ಸಭೆಗೆ ಆಮಂತ್ರಣವನ್ನೇ ನೀಡಿರಲಿಲ್ಲ. ಸಭೆಗೆ ಆಹ್ವಾನ ಕೊಡದೆ ಒಳಗೊಳಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ನಂಜನಗೂಡು ರೈತ ಮುಖಂಡ ವಿದ್ಯಾಸಾಗರ್ ಮತ್ತು ಬೆಂಬಲಿಗರು ಆರೋಪ ಮಾಡಿದ್ದಾರೆ.
ಮಣ್ಣಲ್ಲಿ ಮಣ್ಣಾದ ರೈತ ಹೋರಾಟಗಾರ ಕೆ.ಎಸ್ ಪುಟ್ಟಣ್ಣಯ್ಯ
ವಿದ್ಯಾಸಾಗರ್ ಪ್ರೊ.ಎಂ.ಡಿ.ಎನ್. ಬಣದಲ್ಲಿ ಗುರುತಿಸಿಕೊಂಡಿದ್ದ ರೈತ ಮುಖಂಡರಾಗಿದ್ದು ಧ್ವನಿ ಎತ್ತಿದ ರೈತ ಮುಖಂಡರನ್ನು ರೈತ ಸಂಘದಿಂದ ನೂತನ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಮಾನತು ಮಾಡಿದ್ದಾರೆ. ಪ್ರೊ.ಎಂ.ಡಿ.ಎನ್ ಬಣದ ವಿರುದ್ಧ ಹೊಸತಾಗಿ ನೇಮಕರಾದವರು ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿದ್ದು ಪಚ್ಚೆ ಮತ್ತು ಚುಕ್ಕಿಯಿಂದ ಪ್ರತ್ಯೇಕ ರೈತ ಬಣ ನಿರ್ಮಾಣ ಮಾಡಿ ಅದರಲ್ಲಿಯೇ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.