ತುರುವೇಕೆರೆ ತಾಲೂಕಿನ ಅರೆಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವರ ಕತ್ತಿನಲ್ಲಿದ್ದ 500 ಗ್ರಾಂ ಬೆಳ್ಳಿಯ ಸರ ಹಾಗೂ ಹುಂಡಿಯಲ್ಲಿದ್ದ ಸುಮಾರು 10 ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತುರುವೇಕೆರೆ (ಡಿ.15): ಬಸವೇಶ್ವರ ಸ್ವಾಮಿಯ ಕತ್ತಿಗೆ ಹಾಕಲಾಗಿದ್ದ ಸುಮಾರು 500 ಗ್ರಾಂ ತೂಕದ ಬೆಳ್ಳಿಯ ಸರ ಮತ್ತು ದೇವಾಲಯದ ಹುಂಡಿಯಲ್ಲಿದ್ದ ಸುಮಾರು 10 ಸಾವಿರ ರು.ಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಅರೆಹಳ್ಳಿ ಗ್ರಾಮದ ಗ್ರಾಮ ದೇವರಾಗಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿರುವ ರುದ್ರೇಶ್ ಎಂದಿನಂತೆ ಶನಿವಾರ ಬೆಳಗ್ಗೆ 10.30ಕ್ಕೆ ದೇವಾಲಯಕ್ಕೆ ತೆರಳಿದ್ದರು. ಆ ವೇಳೆ ದೇವಾಲಯದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಯಾರೋ ಒಡೆದಿದ್ದು ಕಾಣಿಸಿತು. ಗಾಬರಿಗೊಂಡ ರುದ್ರೇಶ್ ಕೂಡಲೇ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು. ಗ್ರಾಮಸ್ಥರು ದೇವಾಲಯದ ಒಳಗೆ ಬಂದು ನೋಡಲಾಗಿ ಶ್ರೀ ಬಸವೇಶ್ವರ ಸ್ವಾಮಿಯ ಕತ್ತಿಗೆ ಹಾಕಲಾಗಿದ್ದ ಸುಮಾರು 500 ಗ್ರಾಂ ತೂಕದ ಬೆಳ್ಳಿಯ ಸರ ಮತ್ತು ದೇವಾಲಯದ ಒಳಗಿದ್ದ ಹುಂಡಿಯನ್ನು ಒಡೆದು ಸುಮಾರು 10 ಸಾವಿರ ರೂಗಳನ್ನು ಕಳ್ಳರು ಹೊತ್ತೊಯ್ದಿರುವ ಸಂಗತಿ ಬೆಳಕಿಗೆ ಬಂದಿದೆ. ತುರುವೇಕೆರೆ ಪೊಲೀಸ್ ಠಾಣೆಗೆ ಅರ್ಚಕ ರುದ್ರೇಶ್ ದೂರು ಸಲ್ಲಿಸಿದ್ದಾರೆ.

ದೂರಿನ ಮೇರೆಗೆ ಸ್ಥಳಕ್ಕೆ ಸಿಪಿಐ ಲೋಹಿತ್ ಮತ್ತು ಪಿಎಸೈ ಮೂರ್ತಿ ಧಾವಿಸಿದ್ದರು. ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗ್ರಾಮದ ಮುಖಂಡರಾದ ಪ್ರಕಾಶ್, ರಾಜಕುಮಾರ್, ಜಗದೀಶ್, ನಾಗರಾಜು, ಪುನಿತ್, ಮಂಜುನಾಥ್ ರವರು ಕಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಿ ದೇವರ ಆಭರಣ ಮತ್ತು ಹುಂಡಿ ಹಣವನ್ನು ಹುಡಿಕಿಸಿಕೊಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.