ಮೋದಿ ಕಾ ಅಚ್ಚೇ ದೀನ್ ಎಂಬುದು ಅಂಬಾನಿ, ಅದಾನಿಗೆ ಮಾತ್ರ ಬಂತು. ಸಾಮಾನ್ಯ ಜನರಿಗೆ ಆ ದಿನಗಳು ಬರಲೇ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ,  ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿದರು.

ಚಿಕ್ಕಮಗಳೂರು (ನ.08): ಮೋದಿ ಕಾ ಅಚ್ಚೇ ದೀನ್ ಎಂಬುದು ಅಂಬಾನಿ, ಅದಾನಿಗೆ ಮಾತ್ರ ಬಂತು. ಸಾಮಾನ್ಯ ಜನರಿಗೆ ಆ ದಿನಗಳು ಬರಲೇ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿದರು.

ನೋಟು ಬ್ಯಾನ್ ಮಾಡಿದರೆ ಕಪ್ಪು ಹಣ ಹೊರಬರುತ್ತದೆ ಎಂದು ಪ್ರಧಾನಿ ಹೇಳಿದ್ದರು. ಆದರೆ, ಮನೆಗಳಲ್ಲಿ ಬಡ ಹೆಣ್ಣು ಮಕ್ಕಳು ಪೈಸೆ ಪೈಸೆ ಜೋಡಿಸಿಟ್ಟ ಹಣ ಹೊರಗೆ ತಂದು, ಅದನ್ನು ಬ್ಯಾಂಕಿಗೆ ಕಟ್ಟಿಸಿ, ಅಂಬಾನಿ, ಅದಾನಿಯಂಥವರಿಗೆ ಹಂಚಿಕೆ ಮಾಡಿದರು ಎಂದು ವೇಣೂಗೋಪಾಲ್ ಆರೋಪಿಸಿದರು. ಜಿಎಸ್‌ಟಿ ಜಾರಿಗೆ ತಂದು ಆಹಾರ ಪದಾರ್ಥಗಳ ಮೇಲಿನ ತೆರಿಗೆಯನ್ನು ಶೇ.18 ರಷ್ಟು ಹೆಚ್ಚಳ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ಮೂಲಕ ಬಡಾವಣೆಗೆ ಆಹಾರ ನೀಡಿದೆ. ಇದೇ ಬಿಜೆಪಿ, ಪಕ್ಷಗಳಿರುವ ವ್ಯತ್ಯಾಸ ಎಂದು ಹೇಳಿದರು. ದೇಶದಲ್ಲಿ ಸಾವಿರಾರು ಜಾತಿ, ಉಪ ಜಾತಿಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ಆದರೆ, ಇಲ್ಲಿ ಬಿಜೆಪಿ ಕೋಮುವಾದ ಅಜೆಂಡಾ ಮೂಲಕ ಜನರನ್ನು ಒಡೆದು ಆಳುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು, ನಗರದ ಸುತ್ತಮುತ್ತಲಿನ ಗ್ರಾಮ ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಕ್ಕೆ ಬಂದಿತು. ಮೂಡಿಗೆರೆ ಬ್ಲಾಕ್ ಕಾಂಗ್ರೆ ಸ್ ಅಧ್ಯಕ್ಷ ಹೇಮಶೇಖರ್ ಅವರು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2018 ರ ಚುನಾವಣೆಯಲ್ಲಿ ಇಲ್ಲಿನ ಎಲ್ಲಾ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಬೇಕು. ಆ ಭರವಸೆ ನನಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಿದ್ರೆ ಮಾಡಿ ಕಾಲ ಕಳೆದಿದ್ದಾರೆಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಏನೇನು ಮಾಡಿದೆ ಎಂಬುದನ್ನು ಪುಸ್ತಕದಲ್ಲಿ ಮುದ್ರಿಸಿದ್ದೇವೆ. ಕಾರ್ಯಕರ್ತರು ಅದನ್ನು ಯಡಿಯೂರಪ್ಪ ಅವರಿಗೆ ಕೊಟ್ಟು ಓದಲು ಹೇಳಬೇಕು. ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡಿಲ್ಲ, ಕೊಟ್ಟ ಮಾತಿನಂತೆ ಸ್ವಚ್ಛ ಆಡಳಿತ ನೀಡಿದ್ದೇವೆ ಎಂದು ಹೇಳಿದರು. ನೀವು ಜನರ ಕೆಲಸ ಮಾಡುವ ಬದಲು ಸೆಂಟ್ರಲ್ ಜೈಲಿಗೆ ಹೋಗಿ ಬಂದ್ರಿ, ಯಾವ ರಸ್ತೆ ಮಾಡಿದ್ದೀರಾ, ಎಷ್ಟು ಮನೆಗಳನ್ನು ಮಂಜೂರು ಮಾಡೀದ್ದೀರಿ. ನಿಮ್ಮ ಬಳಿ ಹೇಳಿಕೊಳ್ಳಲು ಯಾವುದೇ ಕಾರ್ಯಕ್ರಮಗಳಿಲ್ಲ. ಅದೇ ಹರಕಲು ಸೀರೆ, ಮುರುಕಲು ಸೈಕಲ್ ಬಿಟ್ಟರೆ ಬೇರೇನೂ ಇದೆ ಎಂದು ಪ್ರಶ್ನಿಸಿದರು. ಅಂದು ಇಂದಿರಾ, ಇಂದು ರಾಹುಲ್, ಸೋನಿಯಾ ಗಾಂಧಿ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಪುನಶ್ಚೇತನವಾಗಬೇಕು. ಆ ಕೆಲಸ ನಿಮ್ಮಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಆಗಬೇಕು. ಆದ್ದರಿಂದ ರಾಹುಲ್ ಗಾಂಧಿ ಅವರನ್ನು ಇಲ್ಲಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು