50 ವರ್ಷ ಆದ್ಮೇಲೆ ಮತ್ತೆ ಶಬರಿಮಲೆಗೆ ಬರ್ತಿನಿ! ಶಬರಿಮಲೆಯಲ್ಲಿ ಗಮನ ಸೆಳೆದ 9 ವರ್ಷದ ಜನನಿಯ ಭಿತ್ತಿಪತ್ರ! ಸಂಪ್ರದಾಯ ಪಾಲನೆಗೆ ಮುಂದಾದ ಜನನಿ ಪೋಷಕರು! ಮುಂದಿನ ವರ್ಷದಿಂದ ಶಬರಿಮಲೆಗೆ ಬರಲ್ಲ ಎಂದ ಜನನಿ ತಂದೆ
ತಿರುವನಂತಪುರಂ(ಅ.20): ಶಬರಿಮಲೆಗೆ ಭೇಟಿ ನೀಡಿದ್ದ 9 ವರ್ಷದ ಬಾಲಕಿಯೊಬ್ಬಳು, ‘ನನಗೆ 50 ವರ್ಷ ತುಂಬಿದ ನಂತರ ನಾನು ಮತ್ತೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬರುತ್ತೇನೆ’.. ಎಂಬ ಭಿತ್ತಿ ಪತ್ರ ಹಿಡಿದು ಎಲ್ಲರ ಗಮನ ಸೆಳೆದಳು.
ತಮಿಳುನಾಡಿನ ಮಧುರೈ ಮೂಲದ ಜನನಿ ಎಂಬ ಬಾಲಕಿ ನಿನ್ನೆ ತನ್ನ ಪೋಷಕರೊಂದಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಳು. ಈ ವೇಳೆ 50 ವರ್ಷವಾದ ಬಳಿಕ ತಾನು ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಭಿತ್ತಿ ಪತ್ರ ಹಿಡಿದು ಗಮನ ಸೆಳೆದಳು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜನನಿ ಪೋಷಕರು, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ತಮ್ಮ ಮಗಳಿಗೆ 10 ವರ್ಷ ತುಂಬಿದ ನಂತರ ದೇವಸ್ಥಾನಕ್ಕೆ ಬರಲ್ಲ ಎಂದು ಹೇಳಿದ್ದಾರೆ. 50 ವರ್ಷ ತುಂಬುವ ಮೊದಲೇ ಜನನಿ ಮತ್ತೆ ಈ ದೇವಸ್ಥಾನಕ್ಕೆ ಬರುವುದು ತಮಗೆ ಇಷ್ಟವಿಲ್ಲ ಎಂದು ಆಕೆಯ ತಂದೆ ಸತೀಶ್ ಕುಮಾರ್ ತಿಳಿಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಈ ನಿಷೇಧ ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್, ಎಲ್ಲಾ ವಯಸ್ಸಿನ ಮಹಿಳೆಯರಿಗೂ ಮುಕ್ತ ಪ್ರವೇಶ ಅವಕಾಶ ಕಲ್ಲಿಸಿದೆ. ಸುಪ್ರೀಂ ಕೋರ್ಟ್ ಆದೇಶ ಲೆಕ್ಕಿಸದೇ ನೂರಾರು ಭಕ್ತರು ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸದಂತೆ ತಡೆಯುತ್ತಿದ್ದಾರೆ.
