ಕಾಂಗ್ರೆಸ್‌ಗೆ ಬಿಜೆಪಿ ಶಾಕ್‌: 6 ಸಂಸದರು 3 ಶಾಸಕರು ಬಿಜೆಪಿಯತ್ತ?| ಮತ್ತೊಂದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಆಘಾತ

ಕೊಚ್ಚಿ[ಜು.22]: ತನ್ನ ಶಾಸಕರ ಪಕ್ಷಾಂತರದಿಂದಾಗಿ ಕರ್ನಾಟಕದಲ್ಲಿ ಸರ್ಕಾರ ಪತನಗೊಳ್ಳುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ಗೆ ಕೇರಳದಲ್ಲೂ ಶೀಘ್ರವೇ ಆಘಾತ ಕಾದಿದೆಯೇ? ಎನ್‌ಡಿಎ ಮಿತ್ರಪಕ್ಷ ಕೆಜೆಎಸ್‌ಪಿ ನಾಯಕ ಪಿ.ಸಿ.ಜಾಜ್‌ರ್‍ ಭಾನುವಾರ ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಭಾನುವಾರ ಇಲ್ಲಿ ಪಕ್ಷದ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪಿ.ಸಿ.ಜಾಜ್‌ರ್‍, ಕೇರಳದ 6 ಕಾಂಗ್ರೆಸ್‌ ಸಂಸದರು ಮತ್ತು 3 ಶಾಸಕರು ಬಿಜೆಪಿ ಹೈಕಮಾಂಡ್‌ ಜೊತೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಉಭಯ ಬಣಗಳ ನಡುವೆ ಮಾತುಕತೆ ಕೂಡಾ ನಡೆದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಶೀಘ್ರವೇ ಅವರೆಲ್ಲಾ ಪಕ್ಷಾಂತರ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಜಾಜ್‌ರ್‍, ಶೀಘ್ರವೇ ಕೇರಳದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಕಡೆಗೆ ಭಾರೀ ಹರಿವು ಸಂಭವಿಸಲಿದೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.

ಆದರೆ ಜಾಜ್‌ರ್‍ ಹೇಳಿಕೆಯನ್ನು ಕಾಂಗ್ರೆಸ್‌ ತಳ್ಳಿಹಾಕಿದೆ. ನಮ್ಮ ಯಾವುದೇ ಸಂಸದರು ಅಥವಾ ಶಾಸಕರು ಬಿಜೆಪಿ ಸೇರುವುದಿಲ್ಲ. ಜಾಜ್‌ರ್‍ ಪ್ರಚಾರಕ್ಕಾಗಿ ಇಂಥ ಹೇಳಿಕೆ ನೀಡಿದ್ದಾರಷ್ಟೇ ಎಂದು ಹೇಳಿದೆ.