ರಸ್ತೆ ಧೂಳು ಗುಡಿಸಿ, ಚರಂಡಿಯ ಹೊಲಸು ಸ್ವಚ್ಛಗೊಳಿಸುವ ಕಾಯಕದಲ್ಲೇ ಬದುಕು ಸವೆಸುವ ಪೌರಕಾರ್ಮಿಕರಿಗೆ 'ವಿದೇಶ ಪ್ರವಾಸ ಭಾಗ್ಯ' ಒಲಿದು ಬಂದಿದೆ. ಇವತ್ತು 40 ಮಂದಿ ಪೌರ ಕಾಂರ್ಮಿಕರು ಸಿಂಗಾಪುರ ಪ್ರವಾಸಕ್ಕೆ ವಿಮಾನ ಏರಿದ್ದಾರೆ.

ಬೆಂಗಳೂರು(ಜು.04): ರಸ್ತೆ ಧೂಳು ಗುಡಿಸಿ, ಚರಂಡಿಯ ಹೊಲಸು ಸ್ವಚ್ಛಗೊಳಿಸುವ ಕಾಯಕದಲ್ಲೇ ಬದುಕು ಸವೆಸುವ ಪೌರಕಾರ್ಮಿಕರಿಗೆ 'ವಿದೇಶ ಪ್ರವಾಸ ಭಾಗ್ಯ' ಒಲಿದು ಬಂದಿದೆ. ಇವತ್ತು 40 ಮಂದಿ ಪೌರ ಕಾಂರ್ಮಿಕರು ಸಿಂಗಾಪುರ ಪ್ರವಾಸಕ್ಕೆ ವಿಮಾನ ಏರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘನತ್ಯಾಜ್ಯ ನಿರ್ವಹಣೆ, ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡುವ ಸಂಬಂಧ ಸರ್ಕಾರ ರೂಪಿಸಿರುವ ಪೌರಕಾರ್ಮಿಕರ ಅಧ್ಯಯನ ಪ್ರವಾಸ ಕಾರ್ಯಕ್ರಮದಡಿ ಸಿಂಗಾಪುರಕ್ಕೆ ಕಳುಹಿಸಲಾಗುತ್ತಿದೆ. ಈ ವರ್ಷದಲ್ಲಿ 1 ಸಾವಿರ ಪೌರಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಮೊದಲ ತಂಡದಲ್ಲಿ 40 ಮಂದಿಯನ್ನು ಸಿಂಗಪುರಕ್ಕೆ ಕಳುಹಿಸಲಾಗಿದೆ. ದೇಶದಲ್ಲೇ ಮಾದರಿಯಾದ ಈ ಕಾರ್ಯಕ್ರಮದಡಿ ಗಾರ್ಬೇಜ್‌ ಡಂಪಿಂಗ್‌, ಚೇಂಬರ್‌ ಕ್ಲೀನಿಂಗ್‌, ಕಸ ವಿಂಗಡಣೆ, ಟಾಯ್ಲೆಟ್‌ ಕ್ಲೀನಿಂಗ್‌ ಮತ್ತಿತರ ಕೆಲಸಗಳ ಬಗ್ಗೆ ಅಧ್ಯಯನ ಮಾಡಲು ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ.

ತಲಾ 75 ಸಾವಿರ ರೂ.ಗಳನ್ನು ಈ ಉದ್ದೇಶಕ್ಕೆ ಸರ್ಕಾರ ವೆಚ್ಚ ಮಾಡುತ್ತಿದ್ದು, ಪ್ರವಾಸ ಸಂದರ್ಭದ ಸ್ವಂತ ಖರ್ಚಿಗಾಗಿ ತಲಾ 5 ಸಾವಿರ ರೂ.ಗಳನ್ನೂ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಮಾರ್ಗದರ್ಶನಕ್ಕಾಗಿ ತಂಡದೊಂದಿಗೆ ಇಬ್ಬರು ಅಧಿಕಾರಿಗಳನ್ನೂ ಕಳಿಸಲಾಗುತ್ತಿದೆ. ಸರ್ಕಾರೊ ಖರ್ಚಿನಲ್ಲಿ ವಿದೇಶ ಅಧ್ಯಯನ ಪ್ರವಾಸದ ಅವಕಾಶವಿದ್ದರೂ ಮಹಿಳಾ ಪೌರಕಾರ್ಮಿಕರು ಈ ಅವಕಾಶ ಬಳಸಿಕೊಳ್ಳಲು ಹಿಂಜರಿಯುತ್ತಿದ್ದು, ಮನವೊಲಿಸುವ ಕೆಲಸ ನಡೆಯುತ್ತಿದೆ.

ಸಿಂಗಪುರಕ್ಕೆ ಹೊರಟ ಮೊದಲ ತಂಡದಲ್ಲಿ 37 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಿದ್ದಾರೆ. ಸಿಂಗಪುರ ಪ್ರವಾಸದ ವೇಳೆ ತಂಡವು ಅಲ್ಲಿನ ವಿಯೋಲಾ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಘನತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಪೌರಕಾರ್ಮಿಕರ ಅಧ್ಯಯನ ಪ್ರವಾಸಕ್ಕೆ ಸಿಟಿ ಮ್ಯಾನೇಜರ್ಸ್‌ ಅಸೋಸಿಯೇಷನ್‌ ಮತ್ತು ವರ್ಲ್ಡ್‌ ಟಾಯ್ಲೆಟ್‌ ಆರ್ಗನೈಸೇಷನ್‌ ಸಹಯೋಗ ನೀಡಿವೆ.