ಮೂರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇನ್ನೂ ಕೆಲ ರಾಜ್ಯಗಳಲ್ಲಿ ರಾಜ್ಯ ಪಾಲರ ವರ್ಗಾವಣೆ ಮಾಡಲಾಗಿದೆ. 

ನವದೆಹಲಿ: ಕೇಂದ್ರ ಸರ್ಕಾರ ಮೂರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಿದೆ ಮತ್ತು ಕೆಲವು ರಾಜ್ಯಪಾಲರುಗಳನ್ನು ವರ್ಗಾವಣೆ ಮಾಡಿದೆ. ಬಿಹಾರ ರಾಜ್ಯಪಾಲರಾಗಿ ಬಿಜೆಪಿ ಹಿರಿಯ ಮುಖಂಡ ಲಾಲ್‌ಜಿ ಟಂಡನ್‌ ಅವರನ್ನು ನೇಮಿಸಲಾಗಿದೆ. ಅಲ್ಲದೆ, ಸತ್ಯದೇವ್‌ ನಾರಾಯಣ್‌ ಆರ್ಯ ಅವರು ಹರ್ಯಾಣ ರಾಜ್ಯಪಾಲರಾಗಿಯೂ, ಬೇಬಿ ರಾಣಿ ಮೌರ್ಯ ಅವರು ಉತ್ತರಾಖಂಡದ ನೂತನ ರಾಜ್ಯಪಾಲರಾಗಿಯೂ ನೇಮಕಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಇನ್ನೊಂದೆಡೆ, ರಾಜ್ಯಪಾಲರ ಆಳ್ವಿಕೆಗೆ ಒಳಪಟ್ಟಿರುವ ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರನ್ನಾಗಿ ಬಿಹಾರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರನ್ನು ವರ್ಗಾಯಿಸಲಾಗಿದೆ. ಹತ್ತು ವರ್ಷಗಳಿಂದ ಮುಂದುವರಿದಿದ್ದ ಹಾಲಿ ರಾಜ್ಯಪಾಲ ಎನ್‌ಎನ್‌ ವೋಹ್ರಾ ಅವರಿಂದ ತೆರವಾದ ಸ್ಥಾನವನ್ನು ಸತ್ಯಪಾಲ್‌ ಅವರು ತುಂಬಲಿದ್ದಾರೆ.

ಇನ್ನು ಹರ್ಯಾಣ ರಾಜ್ಯಪಾಲರಾಗಿದ್ದ ಕಪ್ತಾನ್‌ ಸಿಂಗ್‌ ಸೋಲಂಕಿ ಅವರನ್ನು ತ್ರಿಪುರಾಕ್ಕೆ ವರ್ಗಾವಣೆ ಮಾಡಲಾಗಿದೆ. ತ್ರಿಪುರಾ ರಾಜ್ಯಪಾಲರಾಗಿರುವ ತಥಾಗತ ರಾಯ್‌ ಅವರನ್ನು ಮೇಘಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್‌ ಅವರನ್ನು ಸಿಕ್ಕಿಂಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.