Asianet Suvarna News Asianet Suvarna News

150 ಕ್ಕೂ ಹೆಚ್ಚು ಅಪ್ಪೆ ಮಿಡಿ ಸಂಶೋಧಿಸಿದ ಸಾಗರ ತಾಲೂಕು ಬೇಳೂರಿನ ಕೃಷಿಕ ಸುಬ್ಬಣ್ಣ ಹೆಗಡೆ

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಸಾಗರದ ಬೇಳೂರಿನ ಅಪ್ಪೆ ಮಿಡಿ ಸಂಶೋಧಕ ಬೇಳೂರು ಸುಬ್ಬಣ್ಣ ಅವರಿಗೆ ಸಂದಿದೆ. ಸಾಧಕ ರೈತರಿಗೆ ಗೌರವ ಸಮರ್ಪಣೆ.

Raita Ratna Award 2022 Farmer Scientist Category winner beluru subbanna from Shivamogga vcs
Author
Bangalore, First Published Apr 7, 2022, 10:02 AM IST

ರಾಘವೇಂದ್ರ ಅಗ್ನಿಹೋತ್ರಿ

ಮಲೆನಾಡಿನ ಊಟದ ಬಟ್ಟಲಿನ ಅವಿಭಾಜ್ಯ ಅಂಗ ಉಪ್ಪಿನಕಾಯಿ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದ ಅಪರೂಪದ ಅಪ್ಪೆಮಿಡಿ ತಳಿಗಳÜನ್ನು ಹುಡುಕಿ ಸಂರಕ್ಷಣೆ ಮಾಡಿದ ಸಾಧಕ . ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬೇಳೂರಿನ ಸುಬ್ಬಣ್ಣ. ಇವರು ಅಪ್ಪೆಮಿಡಿಗಳ ನಡೆದಾಡುವ ವಿಶ್ವಕೋಶ ಎಂದೇ ಪ್ರಸಿದ್ಧರು.

ಊಟದ ಉಪ್ಪಿನಕಾಯಿಯಲ್ಲಿ ಎಷ್ಟೊಂದು ವೈವಿಧ್ಯ, ಅದೇ ರೀತಿ ಉಪ್ಪಿನಕಾಯಿಗೆ ಬಳಸುವ ಅಪ್ಪೆಮಿಡಿಗಳಲ್ಲೂ ಎಷ್ಟೊಂದು ವೈವಿಧ್ಯವಿದೆ ಎಂದು ಸಾಗರದ 84 ವರ್ಷದ ಸುಬ್ಬಣ್ಣ ಅವರು ತೋರಿಸಿಕೊಟ್ಟಿದ್ದಾರೆ. ಪಶ್ಚಿಮಘಟ್ಟವನ್ನೆಲ್ಲ ಸುತ್ತಿ ಸುಮಾರು 150 ಕ್ಕೂ ಹೆಚ್ಚು ಬಗೆಯ ಅನೂಹ್ಯ ಅಪ್ಪೆ ಮಿಡಿಗಳನ್ನು ಸಂಶೋಧಿಸಿದ ಖ್ಯಾತಿ ಸುಬ್ಬಣ್ಣ ಅವರದ್ದು. ಈ ಇಳಿ ವಯಸ್ಸಿನಲ್ಲೂ ಅವರಿಗೆ ಅಪ್ಪೆಮಿಡಿಗಳ ಮೇಲಿನ ಪ್ರೀತಿ ಕುಂದಿಲ್ಲ. ಈಗ ಊರು ಸುತ್ತುವುದು ಕಷ್ಟ, ಅದಕ್ಕೆಂದೇ ತಮ್ಮ ಮನೆಯಂಗಳದಲ್ಲೇ 15 ಬಗೆಯ ಅಪ್ಪೆಮಿಡಿ ಬೋನ್ಸಾಯ್‌ ಹಾಗೂ ಕಸಿ ಗಿಡಗಳನ್ನು ಕುಂಡಗಳಲ್ಲಿ ಸಿದ್ಧಪಡಿಸಿಕೊಂಡಿದ್ದಾರೆ. ಮನೆಗೆ ಸಾಕಾಗುವಷ್ಟುಮಿಡಿಮಾವು ಮನೆಯಂಗಳದಲ್ಲೇ ಬೆಳೆದು ದಾಖಲೆ ನಿರ್ಮಿಸಿದ್ದಾರೆ.

ಕನ್ನಡಪ್ರಭ ಸುವರ್ಣ ನ್ಯೂಸ್‌ನವರು ನನ್ನನ್ನು ಹುಡುಕಿ ಪ್ರಶಸ್ತಿ ನೀಡಿರುವುದು ತುಂಬಾ ಸಂತೋಷವಾಗಿದೆ. ನಮ್ಮನ್ನೆಲ್ಲ ಯಾರು ಗುರುತಿಸುತ್ತಾರೆ, ನಾವೇನು ಸಿನೆಮಾ ಅಥವಾ ಕ್ರಿಕೆಟ್‌ ತಾರೆಯರಲ್ಲ. ಆದರೂ ನಮ್ಮನ್ನು ಹುಡುಕಿ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಈಗ ತುಂಬಾ ಜನ ಫೋನ್‌ ಮಾಡಿ, ಅಪ್ಪೆಮಿಡಿಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. - ಬೇಳೂರು ಸುಬ್ಬಣ್ಣ ಹೆಗಡೆ

2006 ರಲ್ಲಿ ಇವರ ತಳಿ ಸಂಶೋಧನೆ ಆರಂಭಗೊಂಡಿತ್ತು. ಅಪ್ಪೆಮಿಡಿಗಳ ಮಹತ್ವ ಮುಂದಿನ ಪೀಳಿಗೆಗೂ ದೊರಕಬೇಕೆಂಬ ಉದ್ದೇಶದಿಂದ ಮೊದಲು ಸೈಕಲ್‌ನಲ್ಲಿ ಊರೂರು ಸುತ್ತಿದರು, ಬಳಿಕ ಜೀಪ್‌ನಲ್ಲಿ ತೆರಳಿ ಅಪ್ಪೆ ಮರಗಳನ್ನು ಹುಡುಕಿದರು. ಅದರ ಮಿಡಿಗಳನ್ನು ತಂದು ಭರಣಿಯಲ್ಲಿ ಹಾಕಿ ಪರೀಕ್ಷೆ ಮಾಡಿದರು. ಸಂಗ್ರಹಿಸಿದ ಪ್ರತಿ ಮಿಡಿಗಳನ್ನು ಪ್ರತ್ಯೇಕ ಡಬ್ಬಗಳಲ್ಲಿ ಹಾಕಿ ಅವುಗಳ ಗುಣಮಟ್ಟ, ಬಾಳಿಕೆ, ರುಚಿ ಅಧ್ಯಯನ ನಡೆಸಿದರು. ಈ ಮಿಡಿಗಳ ಬಾಳಿಕೆ ಬಗ್ಗೆ ಎರಡು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ ಮಾಹಿತಿ ದಾಖಲಿಸಿದ್ದಾರೆ. ಉತ್ತಮ ಮಿಡಿಯಾಗಿದ್ದರೆ ಅದರ ತಾಜಾತನ, ರುಚಿ ಮೂರು ವರ್ಷಗಳವರೆಗೂ ಕೆಡದೇ ಹಾಗೇ ಇರುತ್ತದೆ. ಅಂತಹ ಮಿಡಿಯ ಮರಗಳನ್ನು ಗುರುತಿಸಿ, ಸಂರಕ್ಷಿಸಿದರು.

Raita Ratna Award 2022 ನಮ್ಮೂರ ಜನರಿಗೆ ವಿದೇಶಿ ಹಣ್ಣಿನ ರುಚಿ ತೋರಿಸಿದ ರಾಜೇಂದ್ರ ಹಿಡ್ಲುಮನೆ

ದೊಂಬೆಸಾಲು ಜೀರಿಗೆ, ಗೆಣಸಿನಕುಣಿ ಜೀರಿಗೆ, ಕಬ್ಬಳ್ಳಿ ಜೀರಿಗೆ, ಮಾಳಂಜಿ ಜೀರಿಗೆ, ಚಿನಿದೋಟ ಜೀರಿಗೆ, ಬಾಗಿ ಜೀರಿಗೆ ಹೀಗೆ ಹಲವು ಅಪ್ಪೆಮಿಡಿ ತಳಿಗಳನ್ನು ಸಂಶೋಧಿಸಿ, ಸಂರಕ್ಷಿಸಿದ್ದಾರೆ. ತಾವು ಸಂಶೋಧಿಸಿದ ತಳಿಗಳಿಗೆ ಅಲ್ಲಿಯ ಕ್ಷೇತ್ರೀಯ ಹೆಸರನ್ನೇ ಇಡುತ್ತಾ ಬಂದಿದ್ದಾರೆ. ಉದಾಹರಣೆಗೆ ಶಿಲಾಮಯ ಪ್ರದೇಶದ ಮಾವಿನ ತಳಿಗೆ ಕಲ್ಲುಗೊಟರು ಅಪ್ಪೆ, ಬರಿಗೆಯ ಗದ್ದೆ ಮಧ್ಯ ಸಿಕ್ಕಿದ ಅಪ್ಪೆ ಮಿಡಿಗೆ ಬರಿಗೆ ಗದ್ದೆ ಜೀರಿಗೆ ಎಂದು ಹೆಸರಿಟ್ಟರು. 150ಕ್ಕೂ ಅಧಿಕ ತಳಿಗಳನ್ನು ಹುಡುಕಿದ್ದಾರೆ. ಅದರಲ್ಲಿ ಉತ್ತಮದಲ್ಲಿ ಅತ್ಯುತ್ತಮ 100 ಮರ ಆಯ್ಕೆ ಮಾಡಿ ಅಂಥಾ ತಳಿಗಳನ್ನು ಸಂರಕ್ಷಿಸಿದ್ದಾರೆ.

ಮನೆಯಂಗಳವೇ ಅಪ್ಪೆಮಿಡಿ ತೋಟ

ಸ್ವತಃ ಕಸಿ ತಜ್ಞರೂ ಆಗಿರುವ ಸುಬ್ಬಣ್ಣ ಅವರು ಅಪರೂಪದ ಮಾವಿನ ತಳಿಗಳನ್ನು ಈಗ ತನ್ನ ಮನೆಯಂಗಳದ ಒಂದು ಗುಂಟೆ ಜಾಗದಲ್ಲಿ ಸಂರಕ್ಷಿಸಿದ್ದಾರೆ. ಸುಮಾರು 15 ವಿಧದ ಮಾವಿನ ಗಿಡಗಳು ಅಂಗಳದಲ್ಲಿ ನಳನಳಿಸುತ್ತಿದೆ. ಐದು ಜೀರಿಗೆ ಮಿಡಿ, ಐದು ಅಪ್ಪೆಮಿಡಿ, ಐದು ಸಾಸಿವೆ, ಮೊಸರು ಗೊಜ್ಜು ಮಾಡುವಂತಹ ಮಾವಿನ ಗಿಡಗಳು ಈಗ ಇವರ ಅಂಗಳದಲ್ಲಿವೆ. ಸಿಮೆಂಟ್‌ನ ದೊಡ್ಡ ಪಾಟ್‌ ಹಾಗೂ ಡ್ರಂಗಳಲ್ಲಿ ಬೋನ್ಸಾಯ್‌ ಹಾಗೂ ಕಸಿ ಗಿಡಗಳನ್ನು ನೆಟ್ಟಿದ್ದು, ಬೇಕಷ್ಟುಮಿಡಿ ಮಾವು, ಹಣ್ಣು ಮಾವಿನ ತಳಿಗಳನ್ನು ಬೆಳೆದಿದ್ದಾರೆ. ಆಪಲ್‌ ರಾಜ್‌ ಎಂಬ ವಿಶಿಷ್ಟಹಣ್ಣು ಮಾವು ಇವರ ಅಂಗಳದಲ್ಲೇ ಬೆಳೆಯುವುದು ವಿಶೇಷ.

Raita Ratna Award 2022 ತನ್ನದೇ ಬ್ರ್ಯಾಂಡ್‌ನ ಕೃಷಿ ಉಪಕರಣ ಸೃಷ್ಟಿಸಿದ ಇಮಾಮ್‌ಸಾಬ್‌ ನಡಕಟ್ಟಿನ

ಮಾವಿನ ಗಿಡವೇ ಉಡುಗೊರೆ

ಬೆಂಗಳೂರು ಐಐಎಚ್‌ಆರ್‌ ವಿಜ್ಞಾನಿಗಳು, ಆಸಕ್ತ ರೈತರು, ವಿದ್ಯಾರ್ಥಿಗಳು ಇವರ ಮನೆಗೆ ಅಧ್ಯಯನಕ್ಕಾಗಿ ಭೇಟಿ ನೀಡುತ್ತಾರೆ. ಈ ಸಾಧಕ ತಮ್ಮ ಪರಿಸರದ ಶಾಲೆಗಳಿಗೂ ತೆರಳಿ ಅಲ್ಲಿನ ಆವರಣದಲ್ಲಿ ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಸಮಾರಂಭಗಳಿಗೆ ಹೋದರೆ ಅಲ್ಲಿ ಉಡುಗೊರೆಯಾಗಿ ಮಾವಿನ ಗಿಡಗಳನ್ನೇ ನೀಡುವುದು ಇವರ ವಿಶೇಷತೆ. ಬೆಂಗಳೂರಿನ ಐಐಎಚ್‌ಆರ್‌ನ ಪ್ರಶಸ್ತಿ, ಹವ್ಯಕ ಮಹಾಸಭಾದವರಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

"

Follow Us:
Download App:
  • android
  • ios