ಬಾಲಿವುಡ್‌ ಒತ್ತಡದಿಂದಾಗಿ ಸುಶಾಂತ್‌ ಆತ್ಮಹತ್ಯೆ?| 6 ತಿಂಗಳ ಹಿಂದೆ ಕಣ್ಣೀರಿಟ್ಟಿದ್ದ ನಟ: ಶೇಖರ್‌ ಕಪೂರ್‌|  ಸುಶಾಂತ್‌ಗೆ ಬೇಕಂತಲೇ ಮನ್ನಣೆ ನೀಡಲಿಲ್ಲ: ಕಂಗನಾ

ಮುಂಬೈ(ಜೂ.16): ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದ ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ಸೋಮವಾರ ಸಂಜೆ ನೆರವೇರಿತು. ಹಲವು ನಟರು ಹಾಗೂ ಚಿತ್ರೋದ್ಯಮದ ಮಂದಿ ಈ ವೇಳೆ ಹಾಜರಿದ್ದು ಅಗಲಿದ ನಟನಿಗೆ ವಿದಾಯ ಹೇಳಿದರು. ಈ ನಡುವೆ, ನಟನ ಸಾವಿನ ಕುರಿತು ಸೋಮವಾರ ಸಾಕಷ್ಟುಚರ್ಚೆಯಾಗಿದ್ದು, ಚಿತ್ರೋದ್ಯಮ ಹಾಗೂ ಹೊರಗಿನ ಹಲವು ಮಂದಿ ಬಾಲಿವುಡ್‌ ಬಗ್ಗೆಯೇ ಬೊಟ್ಟು ಮಾಡಿದ್ದಾರೆ.

ಗಾಡ್‌ಫಾದರ್‌ ಇಲ್ಲದೆ ಚಿತ್ರರಂಗ ಪ್ರವೇಶಿಸಿದ ಸುಶಾಂತ್‌ ಅವರನ್ನು ಬಾಲಿವುಡ್‌ ನಿರ್ಲಕ್ಷಿಸಿತ್ತು. ತಮ್ಮ ಸಿನಿಮಾದಲ್ಲಿ ನಟಿಸಲಿಲ್ಲ ಎಂಬ ಕಾರಣಕ್ಕೆ ಬಾಲಿವುಡ್‌ ಅನ್ನು ಆಳುತ್ತಿರುವ ಕೆಲವು ನಿರ್ದೇಶಕರು, ನಿರ್ಮಾಪಕರು ಸುಶಾಂತ್‌ ಅವರ ಸಿನಿಮಾಗಳಿಗೆ ಯಾವುದೇ ಮನ್ನಣೆ ಸಿಗದಂತೆ ನೋಡಿಕೊಂಡರು. ಅವರು ನಟಿಸಿದ್ದ ಸಿನಿಮಾಗಳ ಕೆಲಸಗಳಿಗೆ ಅಡ್ಡಿಪಡಿಸಿದ್ದರು. ಅತ್ಯುತ್ತಮವಾಗಿ ಅಭಿನಯಿಸಿದರೂ ಅವರ ಯಾವುದೇ ಸಿನಿಮಾಗಳಿಗೆ ಪ್ರಶಸ್ತಿ ಸಿಗದಂತೆ ಮಾಡಿದ್ದರು. ಇದರಿಂದ ಸುಶಾಂತ್‌ ತೀವ್ರವಾಗಿ ನೊಂದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

View post on Instagram

ಇದಕ್ಕೆ ಪುಷ್ಟಿನೀಡುವಂತೆ, ಸುಶಾಂತ್‌ ಅವರ ಯಾತನೆ ನನಗೆ ಗೊತ್ತಿತ್ತು. ಅವರನ್ನು ದುಸ್ಥಿತಿಗೆ ದೂಡಿದವರ ಕತೆ ಎಲ್ಲ ನನಗೆ ತಿಳಿದಿದೆ. ಒಮ್ಮೆ ಸುಶಾಂತ್‌ ಅವರು ನನ್ನ ಹೆಗಲ ಮೇಲೆ ಒರಗಿಕೊಂಡು ಕಣ್ಣೀರು ಹಾಕಿದ್ದರು ಎಂದು ನಿರ್ದೇಶಕ ಶೇಖರ್‌ ಕಪೂರ್‌ ಹೇಳಿದ್ದಾರೆ. ಇವರ ‘ಪಾನಿ’ ಚಿತ್ರದಲ್ಲಿ ಸುಶಾಂತ್‌ ನಟಿಸಿದ್ದರು.

ಮನ್ನಣೆ ಸಿಗಲಿಲ್ಲ- ಕಂಗನಾ:

ಸುಶಾಂತ್‌ ಒಬ್ಬ ರಾರ‍ಯಂಕ್‌ ವಿಜೇತ. ಆತ್ಮಹತ್ಯೆ ಮಾಡಿಕೊಳ್ಳುವಷ್ಟುದುರ್ಬಲ ವ್ಯಕ್ತಿ ಅವರಲ್ಲ. ನನ್ನ ಸಿನಿಮಾ ನೋಡಿ, ನನಗೆ ಗಾಡ್‌ಫಾದರ್‌ ಇಲ್ಲ, ನನ್ನನ್ನು ಚಿತ್ರೋದ್ಯಮದಿಂದ ಹೊರಗಟ್ಟಿಬಿಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವರು ಅಂಗಲಾಚಿಕೊಂಡಿದ್ದರು. ಅವರು ಅಭಿನಯಿಸಿದ ಸಿನಿಮಾಗಳಿಗೆ ಬಾಲಿವುಡ್‌ ಮನ್ನಣೆ ನೀಡಲಿಲ್ಲ. ಪ್ರಶಸ್ತಿ ನೀಡಿ ಪುರಸ್ಕರಿಸಲೂ ಇಲ್ಲ ಎಂದು ಚಿತ್ರನಟಿ ಕಂಗನಾ ರಣಾವತ್‌ ಕೂಡ ಕಿಡಿಕಾರಿದ್ದಾರೆ.

ಈ ನಡುವೆ, ಸುಶಾಂತ್‌ ಅವರು ಬಾಲಿವುಡ್‌ನಲ್ಲಿ ಸಂಕಷ್ಟಅನುಭವಿಸಿದ್ದರು. ಯಾರೊಬ್ಬರೂ ಅವರಿಗೆ ನೆರವಿನ ಹಸ್ತ ಚಾಚಲಿಲ್ಲ ಎಂದು ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್‌ ಸಪ್ನಾ ಭವನಾನಿ ಕೂಡ ಟೀಕಿಸಿದ್ದಾರೆ.

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!

ಇದಲ್ಲದೆ ಬಾಲಿವುಡ್‌ನ ಕೆಲ ಮಂದಿಯ ಕುತಂತ್ರದಿಂದಾಗಿ ತಮ್ಮ ಸಿನಿಮಾಗಳು ಓಡದ ಕಾರಣ ಸುಶಾಂತ್‌ ಅವರಿಗೆ ಆರ್ಥಿಕ ಸಂಕಷ್ಟಕೂಡ ಕಾಡಿತ್ತು ಎಂದು ಹೇಳಲಾಗುತ್ತಿದೆ.

ಈ ನಡುವೆ ತಂದೆಯ ಮದುವೆ ಪ್ರಸ್ತಾಪಕ್ಕೆ ಒಪ್ಪಿದ್ದ ಸುಶಾಂತ್‌ ನವೆಂಬರ್‌ನಲ್ಲಿ ಮದುವೆಯಾಗಲು ಒಪ್ಪಿಕೊಂಡಿದ್ದರು ಎಂದು ಆಪ್ತರು ಹೇಳಿದ್ದರೆ, ಸುಶಾಂತ್‌ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಮರಣೋತ್ತರ ವರದಿಯು, ಉಸಿರುಕಟ್ಟಿದ ಸ್ಥಿತಿಯಿಂದಾಗಿ ಸಾವು ಸಂಭವಿಸಿದೆ ಎಂದು ಹೇಳಿದೆ.

ಕಾರಣ ಹೇಳದೆ ಹೋದ ಸುಶಾಂತ್ ಮನೆ ನೋಡಿದ್ದೀರಾ?

ಈ ಮಧ್ಯೆ, ಸುಶಾಂತ್‌ ಸಾವಿನ ಕುರಿತು ಮಹಾರಾಷ್ಟ್ರ ವಿಧಿ ವಿಜ್ಞಾನ ಪ್ರಯೋಗಾಲಯ ತನಿಖೆ ನಡೆಸಲು ಮುಂದಾಗಿದೆ. ರಜಪೂತ್‌ ನಿವಾಸದಿಂದ ಹಲವು ವಸ್ತುಗಳನ್ನು ಸಂಗ್ರಹಿಸಿದ್ದು, ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಕುರಿತು 10 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.