ಆ್ಯಂಕರ್ ಅನುಶ್ರೀ ಸದ್ಯ ಮದುವೆಯ ಮೂಡ್ನಲ್ಲಿದ್ದು, ಮಹಾನಟಿ ವೇದಿಕೆಯಲ್ಲಿ ಅವರಿಗೆ ಪ್ರಪೋಸ್ ಪ್ರಶ್ನೆಯೊಂದು ಎದುರಾಗಿದೆ. ಪ್ರಪೋಸ್ ಒಗಟಿನ ಪ್ರಶ್ನೆಗೆ ಅನುಶ್ರೀ ಹೇಳಿದ್ದೇನು?
ಸದ್ಯ ಆ್ಯಂಕರ್ ಅನುಶ್ರೀ ಅವರು ಸದ್ಯ ಮದುವೆಯ ಮೂಡ್ನಲ್ಲಿ ಇದ್ದಾರೆ. ಅಷ್ಟಕ್ಕೂ ಆ್ಯಂಕರ್ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು. ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡಿದ್ದರು ಅವರ ಫ್ಯಾನ್ಸ್. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು ನಟಿ. ಕಾರ್ಯಕ್ರಮವೊಂದರಲ್ಲಿ ನಟಿ ಮಲೈಕಾ ವಸುಪಾಲ್ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದರು. ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದೂ ಹೇಳಿದ್ದರು. ಅದೇ ರೀತಿ ಅನುಶ್ರೀ ಅವರ ಮದುವೆ ಆಗಸ್ಟ್ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್ ಆಗಿದೆ.
ಅದರ ನಡುವೆಯೇ ಮಹಾನಟಿ ರಿಯಾಲಿಟಿ ಷೋನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್ ಮಾಡುತ್ತಿದ್ದಾರೆ. ಈ ಷೋನಲ್ಲಿಯೂ ಅನೇಕ ಬಾರಿ ನಟಿಯ ಮದುವೆಯ ಪ್ರಸ್ತಾಪವೂ ಆಗಿದೆ. ಆದರೆ ಇದೀಗ ಸ್ಪರ್ಧಿಯೊಬ್ಬರು ಒಗಟನ್ನು ಕೇಳುವ ಮೂಲಕ ಅದಕ್ಕೂ ಅನುಶ್ರೀ ಮದುವೆಗೂ ಲಿಂಕ್ ಮಾಡಲಾಗಿದೆ. ಕಬಾಬ್ ಬಿರಿಯಾನಿಗೆ ಪ್ರಪೋಸ್ ಮಾಡಲು ಹೋಗುತ್ತದೆ, ಆದರೆ ಮಾಡದೇ ವಾಪಸ್ ಬಂದುಬಿಡುತ್ತದೆ, ಯಾಕೆ ಎಂದು ಕೇಳಿದ್ದಾರೆ. ಆದರೆ ಇದಕ್ಕೆ ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಎಲ್ಲಾ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಮದುವೆಯ ಮೂಡ್ನಲ್ಲಿ ಇರೋ ಅನುಶ್ರೀ ಥಟ್ ಎಂದು ಉತ್ತರ ಕೊಟ್ಟಿದ್ದು, ಅದಕ್ಕೆ ಧಮ್ ಇರಲ್ಲ ಎಂದಿದ್ದಾರೆ. ಒಹ್ ಇದೇ ಸರಿಯಾದ ಉತ್ತರ ಎಂದು ಸ್ಪರ್ಧಿ ಹೇಳಿದಾಗ ಎಲ್ಲರೂ ಖುಷಿಪಟ್ಟಿದ್ದಾರೆ.
ಒಟ್ಟಿನಲ್ಲಿ ಆ್ಯಂಕರ್ ಅನುಶ್ರೀಯ ಅಭಿಮಾನಿಗಳಂತೂ ಸಕತ್ ಖುಷಿಯಲ್ಲಿದ್ದಾರೆ. ಅಷ್ಟಕ್ಕೂ, ಇದಾಗಲೇ ತಿಳಿದಿರುವಂತೆ ಅನುಶ್ರೀ ಅವರು ಪುನೀತ್ ರಾಜಕುಮಾರ್ ಪರಿಚಯಿಸಿದ ಹುಡುಗನ ಜೊತೆಯೇ ಮದುವೆಯಾಗುತ್ತಿದ್ದಾರೆ. ಪುನೀತ್ ಅವರ ʼಗಂಧದಗುಡಿʼ ಡಾಕ್ಯುಮೆಂಟರಿಯ ಇವೆಂಟ್ನಲ್ಲಿ ಅನುಶ್ರೀ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್ ಪರಿಚಯ ಆಗಿತ್ತು. ಇವರಿಬ್ಬರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು. ರೋಶನ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಕೂಡ ಹೇಳಲಾಗುತ್ತಿದೆ. ಕಳೆದು ಎರಡು ವರ್ಷಗಳಿಂದ ಈ ಜೋಡಿ ಲವ್ ಮಾಡ್ತಿದೆಯಂತೆ. ಎರಡು ಕುಟುಂಬಗಳು ಈ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ರೆಡಿಯಾಗಿವೆ. ಅನುಶ್ರೀ ಅವರ ತಮ್ಮ ಹೊಸ ಹೋಟೆಲ್ ಆರಂಭಿಸಿದ್ದರು. ಆ ಪೂಜೆಯಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ವೈರಲ್ ಆಗ್ತಿದೆ.
ಇತ್ತೀಚೆಗೆ ಅನುಶ್ರೀ ಅವರು ಕೆಲ ರಿಯಾಲಿಟಿ ಶೋ, ಇವೆಂಟ್ಗಳಲ್ಲಿ “ಈ ವರ್ಷ ನಾನು ಪಕ್ಕಾ ಮದುವೆ ಆಗ್ತೀನಿ, ಈ ವರ್ಷವೇ ನನ್ನ ಮದುವೆ ಆಗುತ್ತದೆ” ಎಂದು ಕಾನ್ಫಿಡೆಂಟ್ ಆಗಿ ಅನುಶ್ರೀ ಹೇಳಿದ್ದರು. ಈಗ ಮದುವೆ ಫಿಕ್ಸ್ ಆಗಿರೋ ಬಗ್ಗೆ ಅನುಶ್ರೀ ಅಧಿಕೃತ ಹೇಳಿಕೆ ನೀಡಬೇಕಿದೆ. ಅನುಶ್ರೀ ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ತಂದೆ ಮನೆ ಬಿಟ್ಟು ಹೋಗಿದ್ದರು. ಆ ನಂತರ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿ ಬೆಳೆಸಿದ್ದರು. ಅನುಶ್ರೀ ಅವರು ಮಂಗಳೂರಿನವರು. ಇಂದು ಕನ್ನಡದ ನಂ 1 ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.
