ತ್ರಿಕೋನ ಪ್ರೇಮಕತೆಯಂತೆ ಸಾಗುವ ಕತೆಯಲ್ಲಿ ಪ್ರೇಮವನ್ನು ಸ್ಥಾಯಿ ಭಾವವಾಗಿ ಇಟ್ಟುಕೊಂಡು ದಂತಕತೆ, ಇತಿಹಾಸ, ಆರ್ಕಿಯಾಲಜಿ, ಕೋಟೆ ಕೊತ್ತಲು, ಆದಿವಾಸಿ, ಅಲೋಪಥಿ, ಆಯುರ್ವೇದ ಹೀಗೆ ಬಹಳಷ್ಟು ವಿಚಾರಗಳನ್ನು ಜೋಡಿಸಿದ್ದಾರೆ. 

ರಾಜೇಶ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಳೆಗಳು, ಬೆಟ್ಟಗಳು, ಜಲಪಾತಗಳು, ಪ್ರೇಮಗಳು, ಉಡಾಫೆಗಳು, ಹಾಡುಗಳು, ವಿರಹಗಳು, ವಿಷಾದಗಳು ತುಂಬಿರುವ ಅಪ್ಪಟ ಭಟ್ರ ಶೈಲಿಯ ಸಿನಿಮಾ. ಭಟ್ಟರು ಮತ್ತೆ ತಮ್ಮ ಶೈಲಿಗೆ ಮರಳಿದ್ದಾರೆ ಅಥವಾ ಹೊರಳಿದ್ದಾರೆ. ಹುಡುಗು ಬುದ್ಧಿಯ ತಾರುಣ್ಯದ ಮಂದಿ ತರಲೆ ತಾಪತ್ರಯ ಬಿಟ್ಟು ಮೆಚ್ಯೂರಾಗುವ ಕತೆ ಹೇಳಿದ್ದಾರೆ.ಭಟ್ಟರ ಟ್ರೇಡ್‌ಮಾರ್ಕ್‌ ಸಿನಿಮಾಗಳಲ್ಲಿ ಹಸಿರಾದ, ಮಳೆ ಮಳೆಯ, ಮಂಜು ಮಂಜಿನ ವಾತಾವರಣವನ್ನು ಕಟ್ಟಿಕೊಟ್ಟಿರುತ್ತಾರೆ. ಅಲ್ಲಿ ಕೊಂಚ ಉಡಾಫೆಯ ನಾಯಕ, ಲವಲವಿಕೆಯ ನಾಯಕಿ ಇರುತ್ತಾರೆ. ಈ ಸಿನಿಮಾದಲ್ಲಿಯೂ ಅಂಥದ್ದೊಂದು ವಾತಾವರಣ, ಪಾತ್ರವರ್ಗ ಇದೆ. ಜೊತೆಗೆ ರಂಗಾಯಣ ರಘು ಕೂಡ ಇದ್ದಾರೆ.

ತ್ರಿಕೋನ ಪ್ರೇಮಕತೆಯಂತೆ ಸಾಗುವ ಕತೆಯಲ್ಲಿ ಪ್ರೇಮವನ್ನು ಸ್ಥಾಯಿ ಭಾವವಾಗಿ ಇಟ್ಟುಕೊಂಡು ದಂತಕತೆ, ಇತಿಹಾಸ, ಆರ್ಕಿಯಾಲಜಿ, ಕೋಟೆ ಕೊತ್ತಲು, ಆದಿವಾಸಿ, ಅಲೋಪಥಿ, ಆಯುರ್ವೇದ ಹೀಗೆ ಬಹಳಷ್ಟು ವಿಚಾರಗಳನ್ನು ಜೋಡಿಸಿದ್ದಾರೆ. ಕಡಲು ಇಲ್ಲಿ ಎಲ್ಲದರ ಕೇಂದ್ರವಾಗಿದೆ. ಮೋಹಕವಾಗಿದೆ. ಮಾಯಕವಾಗಿದೆ. ಕಡಲನ್ನು, ಮಳೆಯನ್ನು, ಭಟ್ಟರ ಸಂಪೂರ್ಣ ಜಗತ್ತನ್ನು ಸಂತೋಷ್ ರೈ ಪಾತಾಜೆ ಸುಂದರವಾಗಿ ಚಿತ್ರಿಸಿದ್ದಾರೆ. ಈ ಸಿನಿಮಾದಲ್ಲಿ ಬಹಳ ಇಷ್ಟವಾಗುವುದು ಯುವ ಕಲಾವಿದರಾದ ಸುಮುಖ, ರಾಶಿಕಾ, ಅಂಜಲಿ ಅನೀಶ್. ಮೂವರೂ ಬಹಳ ಆಪ್ತವಾಗಿ, ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಅಭಿನಯ, ಲವಲವಿಕೆಯಿಂದ ಮೆಚ್ಚುಗೆ ಗಳಿಸುತ್ತಾರೆ. ದತ್ತಣ್ಣ ಗಂಭೀರ ಪಾತ್ರವನ್ನು ನಿಭಾಯಿಸಿ ಮನಸ್ಸು ಗೆಲ್ಲುತ್ತಾರೆ.

ಚಿತ್ರ: ಮನದ ಕಡಲು
ನಿರ್ದೇಶನ: ಯೋಗರಾಜ್ ಭಟ್‌
ತಾರಾಗಣ: ಸುಮುಖ, ರಾಶಿಕಾ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ
ರೇಟಿಂಗ್: 3

ರಂಗಾಯಣ ರಘು ಅವರದಂತೂ ವಿಚಿತ್ರ, ವಿಕ್ಷಿಪ್ತ, ಅಮೋಘ, ಅಗಾಧ ಪಾತ್ರ. ಒಂದು ದೃಶ್ಯದಲ್ಲಂತೂ ಅವರು ತಮ್ಮ ಹಾವಭಾವ, ಭಾಷೆ ಇತ್ಯಾದಿಗಳಿಂದ ಹುಲಿಯನ್ನು ನಾಯಿಯಂತೆ ಹಚಾ ಹಚಾ ಅಂತ ಓಡಿಸಿಬಿಡುತ್ತಾರೆ. ಅಷ್ಟು ಸಶಕ್ತವಾಗಿ ಈ ಪಾತ್ರವನ್ನು ಕೆತ್ತಿದ್ದಾರೆ ಭಟ್ರು. ಆರಂಭದಲ್ಲಿ ಲವಲವಿಕೆಯಿಂದಿರುವ ಭಟ್ಟರು ಅಂತ್ಯದಲ್ಲಿ ವಿಶೇಷ ಸಂದೇಶ ದಾಟಿಸುವಷ್ಟು ಗಂಭೀರರಾಗುತ್ತಾರೆ ಎನ್ನುವುದು ಈ ಸಿನಿಮಾದ ವಿಶೇಷತೆ. ಆ ಸಂದೇಶ ಏನು ಅನ್ನುವುದೇ ಈ ಸಿನಿಮಾದ ಕುತೂಹಲ.