ಒಂದು ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಲು ನಾಯಕ ಹೊರಡುತ್ತಾನೆ. ಆಗ ಅವನು ಎದುರಿಸುವ ಚಿತ್ರ ವಿತ್ರ ತಿರುವುಗಳೇ ಈ ಕತೆಯ ಹಂದರ. ಅವನೊಂದು ಭಾವಿಸುವಷ್ಟರಲ್ಲಿ ವಿಧಿ ಮತ್ತೊಂದು ತೀರ್ಮಾನ ತೆಗೆದುಕೊಂಡಿರುತ್ತದೆ. 

ಆರ್‌.ಎಸ್‌.

Add Asianetnews Kannada as a Preferred SourcegooglePreferred

ಉಲ್ಲಾಸದ ಹುಡುಗ, ಲವಲವಿಕೆಯ ಹುಡುಗಿಯ ಪ್ರೇಮ ಸಲ್ಲಾಪದ ಮೂಲಕ ಕತೆ ತೆರೆದುಕೊಳ್ಳುತ್ತದೆ. ಆ ಹುಡುಗಿ ಈ ಭೂಮಿಯ ಮೇಲೆಯೇ ಇಲ್ಲ ಎಂದು ಯಾರೋ ಹೇಳುವಲ್ಲಿಂದ ನಿಜವಾದ ಕತೆ ಆರಂಭವಾಗುತ್ತದೆ. ಇದು ಪ್ರೇಮ ಕತೆಯ ಆವರಣವನ್ನು ಹೊದ್ದುಕೊಂಡಿರುವ ಸಸ್ಪೆನ್ಸ್‌ ಥ್ರಿಲ್ಲರ್ ಜಾನರ್‌ನ ಸಿನಿಮಾ. ಒಂದು ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಲು ನಾಯಕ ಹೊರಡುತ್ತಾನೆ. ಆಗ ಅವನು ಎದುರಿಸುವ ಚಿತ್ರ ವಿತ್ರ ತಿರುವುಗಳೇ ಈ ಕತೆಯ ಹಂದರ. 

ಅವನೊಂದು ಭಾವಿಸುವಷ್ಟರಲ್ಲಿ ವಿಧಿ ಮತ್ತೊಂದು ತೀರ್ಮಾನ ತೆಗೆದುಕೊಂಡಿರುತ್ತದೆ. ಒಬ್ಬ ಕೊಲೆಗಾರ ಸಿಕ್ಕ ಅನ್ನುವಷ್ಟರಲ್ಲಿ ಮತ್ತೊಂದು ಸುಳಿವು ಗೋಚರವಾಗಿರುತ್ತದೆ. ಅನೂಹ್ಯ ತಿರುವುಗಳ ಬಲೆಯಲ್ಲಿ ನಾಯಕ ಮತ್ತು ಪ್ರೇಕ್ಷಕರು ಸಿಲುಕಿಕೊಳ್ಳುತ್ತಾರೆ. ಒಂದು ಅಂದಾಜಿಗೆ ಬರುವುದೇ ಕಷ್ಟವಾಗುವಂತೆ ನಿರ್ದೇಶಕರು ಕಥಾ ಹೆಣಿಗೆ ರೂಪಿಸಿದ್ದಾರೆ. ಕಥಾ ಬಲೆಯಲ್ಲಿ ವಿಲವಿಲ ಒದ್ದಾಡಿಸುತ್ತಾರೆ. ನಿರ್ದೇಶಕರು ಇಲ್ಲಿ ನೇರವಾಗಿ ಕತೆ ಹೇಳುವ ತಂತ್ರ ಬಳಸಿಲ್ಲ. ನಾನ್‌ಲೀನಿಯರ್‌ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆ ಮೂಲಕ ಪ್ರೇಕ್ಷಕನ ಕುತೂಹಲ ಉಳಿಯುವಂತೆ ಮಾಡಲು ಶ್ರಮಿಸಿದ್ದಾರೆ. 

ಚಿತ್ರ: ಕಣ್ಣಾಮುಚ್ಚೆ ಕಾಡೇಗೂಡೆ
ನಿರ್ದೇಶನ: ನಟರಾಜ್ ಕೃಷ್ಣೇಗೌಡ
ತಾರಾಗಣ: ಅಥರ್ವ, ಪ್ರಾರ್ಥನಾ ಸುವರ್ಣ, ರಾಘವೇಂದ್ರ ರಾಜ್‌ಕುಮಾರ್‌, ಜ್ಯೋತಿಶ್ ಶೆಟ್ಟಿ

ಕೆಲವೊಮ್ಮೆ ಈ ತಂತ್ರ ದಾರಿ ತಪ್ಪಿಸುವುದೂ ಇದೆ. ಅದನ್ನೂ ಒಂದು ತಂತ್ರವೆಂದು ಭಾವಿಸಬಹುದಾಗಿದೆ. ಚಿತ್ರಕತೆಯಲ್ಲಿ ಅಲ್ಲಲ್ಲಿ ಒಮ್ಮೆಮ್ಮೆ ಅನುಕೂಲ ಸಿಂಧುತನ ಕಾಣಿಸಿಕೊಳ್ಳುತ್ತದೆ. ಅದರ ಹೊರತಾಗಿ ಅಂತಿಮವಾಗಿ ಅಚ್ಚರಿಯೊಂದನ್ನು ಅಡಗಿಸಿಟ್ಟುಕೊಂಡಿದ್ದಾರೆ. ಆರಂಭದಲ್ಲಿ ಕಾಣಿಸಿದ್ದು ಅಂತಿಮವಾಗಿ ಬೇರೆಯೇ ರೂಪ ಪಡೆಯುತ್ತದೆ. ಮೂಲತಃ ಇದೊಂದು ಸರ್ವೈವಲ್‌ ಕಥನ. ಮನುಷ್ಯ ತಾನು ಬದುಕುವ ಸಲುವಾಗಿ ಎಂಥಾ ಹೆಜ್ಜೆಯನ್ನಾದರೂ ಇಡಬಹುದು ಅನ್ನುವುದನ್ನು ಈ ಸಿನಿಮಾ ಸಶಕ್ತವಾಗಿ ದಾಟಿಸುತ್ತದೆ.