ಬೆಳಗಾವಿ ಮತ್ತು ಮಹರಾಷ್ಟ್ರ ಗಡಿಯಲ್ಲಿ ಎರಡು ಭಾಷಿಗರ ನಡುವೆ ಇರುವ ಗಲಾಟೆ, ದ್ವೇಷ ಮತ್ತು ಸಮಸ್ಯೆ ಇಂದು- ನಿನ್ನೆಯದಲ್ಲ. ಈ ಗಡಿ ಸಮಸ್ಯೆ ಕೆಲವರ ಪಾಲಿಗೆ ರಾಜಕೀಯದ ಕಣ. ಆದರೆ, ಸಾಮಾನ್ಯರಿಗೆ ನಾಡು, ನುಡಿ ಮತ್ತು ಸ್ವಾಭಿಮಾನದ ಹೋರಾಟ. ಇದೇ ಗಡಿ ರೇಖೆಯ ಅಕ್ಕಪಕ್ಕದ ಕತೆಯನ್ನೇ ಒಳಗೊಂಡ ಸಿನಿಮಾ ‘ಗಡಿನಾಡು’. ನಾಗ್‌ ಹುಣಸೋಡ್‌ ಅವರು ದಶಕಗಳ ಕಾಲದ ಸಮಸ್ಯೆಯೊಂದಕ್ಕೆ ಸಿನಿಮಾ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ತಮ್ಮ ಕತೆಯನ್ನು ಅದೇ ಬೆಳಗಾವಿ, ಅಥಣಿ, ಕೊಲ್ಲಾಪುರ, ಮಹರಾಷ್ಟ್ರ ಗಡಿ ಪ್ರದೇಶಗಳಲ್ಲೇ ರೂಪಿಸಿದ್ದಾರೆ. ಹಾಗಾದರೆ ಆ ಕಾಲದ ಕತೆಯನ್ನು ತೆರೆ ಮೇಲೆ ಹೇಗೆ ತಂದಿದ್ದಾರೆ ಎನ್ನುವ ಕುತೂಹಲ ಮೂಡುವುದು ಸಹಜ.

ಆರ್‌ ಕೇಶವಮೂರ್ತಿ

Add Asianetnews Kannada as a Preferred SourcegooglePreferred

ಅಲ್ಲೊಬ್ಬ ಮಾಜಿ ಮೇಯರ್‌. ಅವನಿಗೆ ಕನ್ನಡ ಅಂದರೆ ಆಗಲ್ಲ. ಬೆಳಗಾವಿ ನಮ್ಮದು ಎನ್ನುವ ಪರಭಾಷಿಗರ ಮನಸ್ಥಿತಿ ಅವನದ್ದು. ಅದಕ್ಕಂತೆ ಅದೇ ಊರಿನಲ್ಲಿ ಕನ್ನಡವೇ ಉಸಿರು, ಕನ್ನಡವೇ ತಾಯಿ ಎಂದು ಗಡಿನಾಡ ಸೇನಾ ಕಟ್ಟುವ ಯುವಕ ಇದ್ದಾನೆ. ನಿರೀಕ್ಷೆಯಂತೆ ಈ ಇಬ್ಬರ ನಡುವೆ ಮಾತಿನ ಯುದ್ಧದ ಜತೆಗೆ ಹೊಡೆದಾಟಗಳು ನಡೆಯುತ್ತವೆ. ಈ ನಡುವೆ ಬೆಳಗಾವಿಯಲ್ಲಿ ಭಾಷೆಯ ಹೋರಾಟ ಜ್ವಾಲೆ ಹೆಚ್ಚಾಗುತ್ತದೆ. ಎಲ್ಲಿ ನೋಡಿದರೂ ಬೆಂಕಿ, ಪೊಲೀಸರ ಲಾಠಿ ಪ್ರಹಾರದ ನಡುವೆ ಹುಟ್ಟೂರು ಸೇರುವಲ್ಲಿ ವಿಫಲವಾಗುವ ನಾಯಕಿ. ಈಕೆ ಮರಾಠಿ. ಬೆಳಗಾವಿಯಿಂದ ಕೊಲ್ಲಾಪುರ ಮೂಲಕ ಮಹರಾಷ್ಟ್ರಕ್ಕೆ ಹೋಗಬೇಕಾದ ನಾಯಕಿ, ಬೆಳಗಾವಿಯಲ್ಲೇ ಉಳಿಯುತ್ತಾಳೆ. ಆಕೆಯನ್ನು ರಕ್ಷಿಸಿ ಮನೆಗೆ ಕರೆದುಕೊಂಡು ಬರುವುದು ಕನ್ನಡ ಹೋರಾಟಗಾರ ನಾಯಕ. ಹೀಗಾಗಿ ಕನ್ನಡದ ಹುಡುಗ, ಮರಾಠಿ ಹುಡುಗಿ ಜತೆಯಾಗುತ್ತಾರೆ. ಗಡಿ ಸಮಸ್ಯೆಯ ಹಿನ್ನೆಲೆಯಲ್ಲಿ ಇವರ ಪ್ರೇಮ ಕತೆಯೂ ಸಾಗುತ್ತದೆ.

ಚಿತ್ರ ವಿಮರ್ಶೆ: ನಾನು ಮತ್ತು ಗುಂಡ

ಆದರೆ, ಮಗಳು ನಾಪತ್ತೆಯಾದ ವಿಷಯ ತಿಳಿದು ಸಿಟ್ಟಾಗುತ್ತಾನೆ ನಾಯಕಿ ತಂದೆ. ಜತೆಗೆ ಈಕೆಯನ್ನು ಮದುವೆ ಆಗಲು ತುದಿಗಾಳಲ್ಲಿ ನಿಂತಿರುವ ಆಕೆಯ ಸೋದರ ಮಾವ ಬೇರೆ ನಾಯಕನ ಮೇಲೆ ದ್ವೇಷ ಬೆಳೆಸಿಕೊಳ್ಳುತ್ತಾನೆ. ಮುಂದೆ ಪ್ರೀತಿ ಮತ್ತು ಭಾಷೆಗಾಗಿ ಹೋರಾಟ ಶುರುವಾಗುತ್ತದೆ. ಇದರಲ್ಲಿ ನಾಯಕ ಗೆಲ್ಲುತ್ತಾನೆಯೇ, ಬೆಳಗಾವಿಯ ಮಾಜಿ ಮೇಯರ್‌ ಏನಾಗುತ್ತಾನೆ, ಬೆಳಗಾವಿ ಗಡಿ ಸಮಸ್ಯೆಯನ್ನು ಈ ‘ಗಡಿನಾಡು’ ಸಿನಿಮಾ ಸೂಕ್ತವಾಗಿ ತೆರೆದಿಡುತ್ತದೆಯೇ... ಹೀಗೆ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕು.

ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

ಒಂದು ಸೂಕ್ಷ್ಮ ಸಮಸ್ಯೆಯನ್ನು ಸಿನಿಮಾ ಮಾಡುವಾಗ ಇರಬೇಕಾದ ಪೂರ್ವ ತಯಾರಿ, ಅಧ್ಯಯನ ಇಲ್ಲ. ಭಾವನಾತ್ಮಕ ನೆಲೆಯಲ್ಲಿ ಒಂದಿಷ್ಟುಡೈಲಾಗ್‌ಗಳನ್ನು ಬರೆದುಬಿಟ್ಟರೆ ಸಿನಿಮಾ ಆಗುತ್ತದೆ ಎನ್ನುವಂತೆ ಈ ಚಿತ್ರವನ್ನು ಮಾಡಿದ್ದಾರೆ. ಕತೆಗೆ ಪೂರಕವಾದ ಕಲಾವಿದರ ಆಯ್ಕೆ, ತಾಂತ್ರಿಕತೆ, ಚಿತ್ರಕಥೆ ಹೀಗೆ ಯಾವುದನ್ನೂ ಇಲ್ಲಿ ನಿರೀಕ್ಷೆ ಮಾಡದೆ ಸುಮ್ಮನೆ ಹೋಗಿ ಬರುವವರಿಗೆ ‘ಗಡಿನಾಡು’ ಸನಿಹವಾಗಬಹುದು. ಪ್ರಭು ಸೂರ್ಯ ಆ್ಯಕ್ಷನ್‌ನಲ್ಲಿ ಓಕೆ. ಸಂಚಿತಾ ಪಡುಕೋಣೆ ಡ್ಯಾನ್ಸ್‌ನಲ್ಲಿ ಗಮನ ಸೆಳೆಯುತ್ತಾರೆ. ಉಳಿದಿದ್ದು ತೆರೆ ಮೇಲೆ ನೋಡಿ.

ಚಿತ್ರ ವಿಮರ್ಶೆ: ಅವನೇ ಶ್ರೀಮನ್ನಾರಾಯಣ